ಹಿರಿಯಡ್ಕ, ಜು 25 (DaijiworldNews/PY): ಸಾಲಗಾರರ ಒತ್ತಡದಿಂದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಮೃತ ಯುವಕ ಬೊಮ್ಮಾರಬೆಟ್ಟು ನಿವಾಸಿ ಆಶಿಶ್ (30) ಎಂದು ಗುರುತಿಸಲಾಗಿದೆ.
ಆಶಿಶ್ ಅವರು ತನ್ನ ಪತ್ನಿ ಶ್ವೇತಾ (30) ಹಾಗೂ 3 ವರ್ಷದ ಮಗ ತಕ್ಷಕ್ನೊಂದಿಗೆ ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದು, ಟಿಎಎಸ್ ಸೆಕ್ಯುರಿಟಿ ಸರ್ವಿಸ್ ಎಂಬ ಏಜೆನ್ಸ್ ನಡೆಸಿಕೊಂಡಿದ್ದರು. ಅವರು ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದು, ಈ ಬಗ್ಗೆ ಸಾಲ ನೀಡಿದವರು ಆಗಾಗ ಕರೆ ಮಾಡಿ ಹಾಗೂ ಭೇಟಿ ಮಾಡಿ ಸಾಲ ತೀರಿಸುವಂತೆ ಹೇಳುತ್ತಿದ್ದರು.
ಆಶಿಶ್ ತನ್ನ ಸಂಸಾರದೊಂದಿಗೆ 6 ತಿಂಗಳ ಹಿಂದೆ ಊರಿಗೆ ಬಂದಿದ್ದು, ಆಗಲೂ ಸಾಲ ನೀಡಿದವರು ಸಾಲ ಕಟ್ಟುವಂತೆ ಕರೆ ಮಾಡಿ ಹೇಳುತ್ತಿದ್ದರು. ಸಾಲ ತೀರಿಸಲಾಗದೇ ಆಶಿಶ್ ಅವರು ಮಾನಸಿಕವಾಗಿ ನೊಂದುಕೊಂಡು ನಾವು ಸಾಯುವುದೇ ಒಳ್ಳೆಯದು ಎಂದು ಮನೆಯವರಲ್ಲಿ ಹೇಳುತ್ತಿದ್ದರು ಎನ್ನಲಾಗಿದೆ.
ಈ ಕಾರಣದಿಂದ ಜು 24ರಂದು ಬೆಳಿಗ್ಗೆ ಬೊಮ್ಮಾರಬೆಟ್ಟು ಗ್ರಾಮದ ಬಸ್ತಿಯಲ್ಲಿರುವ ತನ್ನ ಮನೆಯ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್ಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.