ಬೆಳ್ತಂಗಡಿ, ಜು 25 (Daijiworld News/MSP): ಸುಮಾರು ಐದು ಎಕರೆ ಬೆಲೆಬಾಳುವ ಕೃಷಿ ಭೂಮಿಯಲ್ಲಿ ಕೃಷಿಕರೊಬ್ಬರು ಕಾರ್ಗಿಲ್ ಯುದ್ಧದ ಸಂದರ್ಭ ಮಡಿದ ಯೋಧರ ಹೆಸರಿನಲ್ಲಿ ಗಿಡಗಳನ್ನು ನೆಡುವ ಅಪೂರ್ವ ಯೋಜನೆಯೊಂದನ್ನು ಹಮ್ಮಿಕೊಂಡಿದ್ದಾರೆ.
ಶುಕ್ರವಾರ ಅವರ ಹಸಿರು ನಿರ್ಮಾಣದ ಮಹಾನ್ ಕಾರ್ಯಕ್ಕೆ ಚಾಲನೆ ನೀಡಲಾಯಿತು. ತಾಲೂಕಿನ ಮುಂಡಾಜೆಯ ಭಿಡೆ ಮನೆತನದ ಧುಂಬೆಟ್ಟು ನಿವಾಸಿ ಸಚಿನ್ ಭಿಡೆಯವರ ಕಲ್ಪನೆ ಎಲ್ಲರಿಗೂ ಮಾದರಿಯೆನಿಸುವಂತಿದೆ. ಕಾರ್ಗಿಲ್ ವಿಜಯ ದಿನದ ನೆನಪಿಗಾಗಿ ತಮ್ಮ ಐದು ಎಕರೆ ಪಟ್ಟಾ ಜಾಗದಲ್ಲಿ 800 ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಲು ಮುಂದಾಗಿದ್ದಾರೆ. ತಾನು ಚಿಕ್ಕವನಿದ್ದಾಗ ತನ್ನ ತಂದೆ ಗಣೇಶ್ ಭಿಡೆಯವರು ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಯೋಧರ ಕಷ್ಟಗಳನ್ನು ವಿವರಿಸಿ, ಒಂದಿಷ್ಟು ಹಣವನ್ನು ನೀಡಿ,ಕಾರ್ಗಿಲ್ ನಿಧಿಗೆ ಮನಿಯಾರ್ಡರ್ ಮೂಲಕ ತನ್ನಲ್ಲಿ ಜಮಾ ಮಾಡಲು ಹೇಳಿರುವುದು ಈ ಕೆಲಸಕ್ಕೆ ಸ್ಪೂರ್ತಿ ಎಂದು ಅವರು ಹೇಳಿದ್ದಾರೆ.
ಯೋಧರನ್ನು ಸ್ಮರಿಸಿ ಗೌರವ ಸೂಚಿಸುವುದು ತನ್ನ ಗುರಿ, ಅಲ್ಲದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳು ಯಾವ ಸಮಯದಲ್ಲಿ ಬೇಕಾದರೂ ಬಂದು ಈ ಗಿಡಗಳನ್ನು ವೀಕ್ಷಿಸಬಹುದಾಗಿದೆ, ಅವರಿಗೆ ಸಂಪೂರ್ಣ ರೀತಿಯ ಸಹಕಾರ, ಆಹಾರ ಮತ್ತು ವಸತಿ ವ್ಯವಸ್ಥೆಯನ್ನೂ ಸಚಿನ್ ಮಾಡಲಿದ್ದಾರೆ.
ಅರಣ್ಯ ಇಲಾಖೆಯ ಮುಂಡಾಜೆ ಕಾಪು ನರ್ಸರಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಜಾತಿಯ ಗಿಡಗಳನ್ನು ಪಡೆದು ಇಲ್ಲಿ ನೆಡಲಾಗುತ್ತದೆ.ಉದ್ದೇಶಿತ ಜಾಗಕ್ಕೆ ಕಾರ್ಗಿಲ್ ವನ ಎಂದು ನಾಮಕರಣಗೊಂಡಿದ್ದು, ಸಚಿನ್ ಭಿಡೆಯವರ ಮಾತೃಶ್ರೀ ಲತಾ ಗಣೇಶ ಭಿಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣಭಟ್, ಗೌರವಾಧ್ಯಕ್ಷ ಎಂ.ವಿ.ಭಟ್ ಮಾಜಿ ಸೈನಿಕರಾದ ಶ್ರೀಕಾಂತ ಗೋರೆ, ಜಗನ್ನಾಥ ಶೆಟ್ಟಿ, ಸುನಿಲ್ ಶೆಣೈ, ಪ್ರಸನ್ನ ಬಿ. ಶಿಶಿಲ,ರಾಮ್ ಭಟ್, ಹರೀಶ್ ರೈ, ಉಮೇಶ್ ಬಂಗೇರ, ಪರಿಸರವಾದಿ ದಿನೇಶ್ ಹೊಳ್ಳ, ಅವಿನಾಶ್ ಭಿಡೆ ಉಪಸ್ಥಿತರಿದ್ದರು. ಬಾಲಚಂದ್ರ ನಾಯಕ್ ಸ್ವಾಗತಿಸಿ,ನಾರಾಯಣ ಪೂಜಾರಿ ವಂದಿಸಿದರು.