ಮಂಗಳೂರು, ಜು. 24 (DaijiworldNews/SM): ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ... ತುಳುನಾಡಿನಲ್ಲಿ ವಿಶೇಷತೆ, ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. ವರ್ಷಂಪ್ರತಿ ಆಷಾಢ ಅಮಾವಾಸ್ಯೆಯ 5ನೇ ದಿನದಂದು ಈ ಹಬ್ಬದ ಸಂಭ್ರಮ ಎದ್ದುಕಾಣುತ್ತದೆ. ತುಳುನಾಡಿನ ಜನತೆ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, ಹಲವು ಭಾವನೆಗಳು ಪಂಚಮಿಯೊಂದಿಗೆ ಬೆಸೆದುಕೊಂಡಿದೆ. ಆದರೆ, ಈ ಬಾರಿ ನಾಗರ ಪಂಚಮಿ ಹಬ್ಬ ಕಳೆಗುಂದಿದೆ. ನಾಗರ ಪಂಚಮಿ ಸಂಭ್ರಮಕ್ಕೆ ಕೊರೊನಾ ಕರಿ ಛಾಯೆ ಬೀರಿದೆ.
ಕೊರೊನಾ ಸೋಂಕು ಏರಿಕೆಯ ಹಾದಿ ತುಳಿದ ಪರಿಣಾಮ ರಾಜ್ಯದಲ್ಲಿರುವ ನಾಗ ದೇವಾಲಯಗಳಲ್ಲಿ, ನಾಗ ಬನಗಳಲ್ಲಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆಗೆ ಅವಕಾಶವಿಲ್ಲ. ಕೊರೊನಾ ಕಾರಣದಿಂದ ಹಬ್ಬವನ್ನು ಸರಳವಾಗಿ ಆಚರಿಸುವಂತೆ ರಾಜ್ಯ ಸರಕಾರ ಕರುನಾಡಿನ ಭಕ್ತರಲ್ಲಿ ವಿನಂತಿಸಿದೆ.
ದೇವಾಲಯಗಳಲ್ಲಿ ಅರ್ಚಕರಿಗಷ್ಟೇ ಅವಕಾಶ:
ಕರಾವಳಿ ಸೇರಿದಂತೆ ರಾಜ್ಯದಲ್ಲಿ ಹಿಂದೂ ಸಂಪ್ರದಾಯದಲ್ಲಿ ನಾಗನನ್ನು ದೇವರೆಂದು ಪೂಜಿಸಲಾಗುತ್ತದೆ. ಸಂತಾನ ಪ್ರಾಪ್ತಿ ಸೇರಿದಂತೆ ನೂರೆಂಟು ವಿಘ್ನಗಳಿಂದ ಮುಕ್ತಿ ಹೊಂದುವ ಸಲುವಾಗಿ ನಾಗನನ್ನು ಆರಾಧಿಸುವ ಸಂಪ್ರದಾಯ ಭಕ್ತರಲ್ಲಿದ್ದು, ವರ್ಷಂಪ್ರತಿ ನಾಗನ ಪ್ರತಿಮೆಗೆ ತನು ಅರ್ಪಿಸುವ ಸಂಪ್ರದಾಯ ಭಕ್ತರು ಮಾಡುತ್ತಲೇ ಬಂದಿದ್ದಾರೆ. ಆದರೆ, ಈ ವರ್ಷ ಕೊರೊನಾ ತೀವ್ರವಾಗಿ ವ್ಯಾಪಿಸುತ್ತಿರುವುದು ಇದಕ್ಕೆ ಅಡ್ಡಿಯನ್ನುಂಟು ಮಾಡಿದೆ. ಸಾರ್ವಜನಿಕರು ಜತೆಯಾಗಿ ಸೇರುವುದಕ್ಕೆ ಅವಕಾಶವಿಲ್ಲ. ಸಾಮಾಜಿಕ ಅಂತರ ಕಾಪಾಡುವ ಹಾಗೂ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಬ್ಬ ಆಚರಣೆಗೆ ಅವಕಾಶ ನೀಡಿಲ್ಲ.
ಇನ್ನು ನಾಗಾರಾಧನೆಯನ್ನು ನಡೆಸುವ ಪ್ರಮುಖ ಕ್ಷೇತ್ರಗಳಲ್ಲಿ, ನಾಗ ಬನಗಳಲ್ಲಿ ಪ್ರತಿ ವರ್ಷ ಭಕ್ತರು ಹಾಲೆರೆಯುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದರು. ಲಕ್ಷಾಂತರ ಭಕ್ತರು ಜೊತೆ ಸೇರುತ್ತಿದ್ದರು. ಈ ಸನ್ನಿವೇಶ ಇಂದಿನ ಪರಿಸ್ಥಿತಿಯಲ್ಲಿ ಎದುರಾದಲ್ಲಿ ಸೋಂಕು ನಿಯಂತ್ರಿಸುವುದು ಕಷ್ಟ ಸಾಧ್ಯ. ಈ ಕಾರಣದಿಂದಾಗಿ ದೇವಾಲಯ ನಾಗಬನಗಳಲ್ಲಿ ಕೇವಲ ಅರ್ಚಕರು ಮಾತ್ರವೇ ಪೂಜೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಮನೆ ಪರಿಸರದಲ್ಲೇ ಆಚರಿಸಿ:
ಸಾರ್ವಜನಿಕವಾಗಿ ನಾಗಾರಾಧನೆಗೆ ಸಮ್ಮತಿ ಸಿಗದ ಕಾರಣದಿಂದಾಗಿ ಭಕ್ತರು ತಮ್ಮ ಮನೆ ಪರಿಸರದಲ್ಲೇ ಹಬ್ಬ ಆಚರಿಸುವುದು ಪ್ರಸ್ತುತವಾಗಿದೆ. ಮನೆ ವಠಾರದಲ್ಲಿರುವ ನಾಗ ಪ್ರತಿಮೆಗೆ ಹಾಲೆರೆದು ನಾಗಾರಾಧನೆ ಆಚರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಭಕ್ತರು ಸರಕಾರ ಹೊರಡಿಸಿರುವ ಆದೇಶ ಪಾಲಿಸುವುದು ಅಗತ್ಯವಾಗಿದೆ.
ಸಾಮಾಜಿಕ ಅಂತರ ಕಾಪಾಡುವುದು ಕಷ್ಟ:
ಸಾರ್ವಜನಿಕವಾಗಿ ನಾಗಾರಧನೆಗೆ ಅವಕಾಶ ನೀಡಿದ್ದಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗುವ ಜತೆಗೆ ಸಾಮಾಜಿಕ ಅಂತರ ಕಾಪಾಡುವುದು ಸವಾಲಾಗಿ ಪರಿಣಮಿಸಲಿದೆ. ಈ ಕಾರಣದಿಂದಾಗಿ ಸಾರ್ವಜನಿಕ ಹಬ್ಬ ಆಚರಣೆಗೆ ಅವಕಾಶ ನಿರಾಕರಿಸಲಾಗಿದೆ. ಇದೀ ನಾಡಿನ ಪರವಾಗಿ ದೇವಾಲಯಗಳಲ್ಲಿ, ನಾಗಬನಗಳಲ್ಲಿ ಅರ್ಚಕರು, ಹಾಗೂ ಆಡಳಿತ ಮಂಡಳಿಯವರು ನಾಗಾರಾಧನೆ ನಡೆಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಿದ್ದಾರೆ.
ಈ ಬಾರಿಯ ನಾಗರ ಪಂಚಮಿಯನ್ನು ಮನೆ ಪರಿಸರದಲ್ಲೇ ಆಚರಿಸೋಣ.... ಕೊರೊನಾ ವಿರುದ್ಧ ನಾವು ಗೆಲ್ಲೋಣ....