ಬೆಳ್ತಂಗಡಿ, ಜು. 20 (DaijiworldNews/MB) : ಒಂದೆಡೆ ಗೋವುಗಳ ಅಕ್ರಮ ಸಾಗಾಟ, ಇನ್ನೊಂದೆಡೆ ದರೋಡೆ ಮಾಡಿರುವ ಘಟನೆ ಕುವೆಟ್ಟು ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ತಾಲೂಕಿನ ನಡ ಗ್ರಾಮದ ಕೆಲ್ತಾಜೆ-ಪಡ್ಪು ಎಂಬಲ್ಲಿ ಪಿಕ್ ಅಪ್ ವಾಹನವೊಂದು ಅತಿ ವೇಗದಲ್ಲಿ ಹೋಗುತ್ತಿತ್ತು. ಇದನ್ನು ಸ್ಥಳೀಯ ಗುರು ಎಂಬುವರು ಗಮನಿಸಿದಾಗ ಅದರಲ್ಲಿ ಜಾನುವಾರುಗಳಿರುವುದು ಕಂಡು ಬಂತು. ಕೂಡಲೇ ಅವರು ತಮ್ಮ ಸ್ನೇಹಿತ ನಿತೀಶ ಎಂಬಾತನೊಂದಿಗೆ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಹೋದರು.
ಪಿಕಪ್ ವಾಹನವು ಗುರುವಾಯನಕೆರೆ ಸನಿಹ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿನ ಜನತಾ ಕಾಲನಿಯೊಳಗೆ ತೆರಳಿತು. ಅಲ್ಲಿಗೆ ಹಿಂಬಾಲಿಸಿಕೊಂಡು ಹೋಗುವುದು ಅತೀ ಅಪಾಯಕಾರಿ ಕಾರ್ಯ ಎಂದು ಮನಗಂಡ ಬೈಕ್ ಸವಾರರು ವಾಪಸು ತೆರಳುತ್ತಿದ್ದಂತೆ 5 ಮಂದಿ ಅಪರಿಚಿತರು ಆಲ್ಟೋ ಕಾರಿನಲ್ಲಿ ಹಿಂಬಾಲಿಸಿ ಬಂದು ಏಕಾಏಕಿ ಬೈಕ್ ನಲ್ಲಿದ್ದ ಹಿಂಬದಿ ಸವಾರನನ್ನು ಎಳೆದು ಹಾಕಿದ್ದಲ್ಲದೆ ಅವರಿಬ್ಬರ ಮೇಲೆ ಹಲ್ಲೆ ನಡೆಸಿ ತಲೆಗೆ ಗಂಭೀರ ಗಾಯಗೊಳಿಸಿದ್ದಾರೆ. ಇಷ್ಟೇ ಅಲ್ಲದೆ ಬೈಕ್ ಸವಾರನ ಕೈಯಲ್ಲಿದ್ದ ರೂ. 15,000 ಮೌಲ್ಯದ ಬ್ರೇಸ್ ಲೆಟ್ ನ್ನು, ಕಿಸೆಯಲ್ಲಿದ್ದ ರೂ. 2,500 ನಗದನ್ನು ಹಾಗು ಎರಡು ಸೆಲ್ ಫೋನ್ ಗಳನ್ನು ದರೋಡೆ ಮಾಡಿದ್ದಾರೆ.
ಗುರು ಎಂಬುವರು ದೂರು ನೀಡಿದ್ದು ಬೆಳ್ತಂಗಡಿ ಪೋಲಿಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.