ಸುಳ್ಯ, ಜು.19 (DaijiworldNews/MB) : ಮಿಸೆಸ್ ಕರ್ನಾಟಕ -2020 ಕಿರೀಟವನ್ನು ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ.ಎಸ್ ಅವರು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಜುಲೈ 11 ರಂದು ಮೈಸೂರಿನ ಹೋಟೆಲ್ ಒಂದರ ಸಭಾಂಗಣದಲ್ಲಿ ಈ ಸ್ಪರ್ಧೆ ನಡೆದಿದ್ದು ಈ ಸ್ಪರ್ಧೆಯಲ್ಲಿ ಗೆದ್ದ ಸುಪ್ರೀತಾರವರಿಗೆ ಸ್ಪರ್ಧೆ ಆಯೋಜಿಸಿದ ಮೈಸೂರಿನ ಆರ್.ಆರ್.ಗ್ರೂಪ್ಸ್ (ರಾಕಿಂಗ್ ರತು ಗ್ರೂಪ್ಸ್) ನ ಎಂ.ಡಿ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡುವ ಮೂಲಕ ಗೌರವಿಸಿದರು.
ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ.ಸುರೇಶ್-ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಸುಪ್ರೀತಾ ಅವರು ಸುಳ್ಯ ಬೀರಮಂಗಲ ನಿವಾಸಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ.ಯವರ ಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಸೂರ್ಯಕಲಾ ತ್ರಿವಿಕ್ರಮ ರವರ ಸೊಸೆಯಾಗಿದ್ದಾರೆ. ಇವರಿಗೆ ಓರ್ವ ಪುತ್ರನಿದ್ದಾನೆ.
ಉಡುಪಿಯಲ್ಲಿ ತನ್ನ ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ ಪಡೆದ ಸುಪ್ರೀತಾ ಅವರು ಪುತ್ತೂರಿನ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದು ಬಳಿಕ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2008 ರಲ್ಲಿ ಬಿ.ಬಿ.ಎಂ. ಪದವಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದ ಇವರು ಚಿತ್ರಕಲೆ, ಸಂಗೀತ, ಯೋಗ ಮೊದಲಾದ ಹವ್ಯಾಸಗಳನ್ನೂ ಹೊಂದಿದ್ದು ಪ್ರಸ್ತುತ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.