ಮಂಗಳೂರು, ಜು.19 (DaijiworldNews/MB) : ''ಪಕ್ಷದಿಂದ ಯುವ ನಾಯಕರು ಅಥವಾ ಯುವಕರು ಹೊರ ಹೋದಲ್ಲಿ ಯಾವುದೇ ನಷ್ಟವಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಹೇಳಿರುವುದು ಅವರು 'ಯುವ ವಿರೋಧಿ ಮನಸ್ಥಿತಿ'ಗೆ ಹಿಡಿದ ಕೈಗನ್ನಡಿಯಾಗಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆ ಮಾಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ಸಮಾವೇಶದಲ್ಲಿ ''ಪಕ್ಷದಿಂದ ಯುವ ನಾಯಕರು ಹಾಗೂ ಯುವಕರು ಹೊರಹೋದ್ದಲ್ಲಿ ಯಾವುದೇ ನಷ್ಟವಿಲ್ಲ'' ಎಂದು ಹೇಳಿದ್ದರು.
ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿರುವ ನಳಿನ್ ಕುಮಾರ್ ಕಟೀಲ್ ಅವರು, ''ಈ ವಿಚಾರ ಅವರ ಪಕ್ಷಕ್ಕೆ ಸಂಬಂಧಿಸಿದ ಆಂತರಿಕ ವಿಚಾರ. ಆದರೂ ಸಾಮಾಜಿಕ ದೃಷ್ಟಿಯಲ್ಲಿ ಅವರ ಹೇಳಿಕೆಯನ್ನು ಗಮನಿಸಿದಾಗ ಯುವಕರ ವಿಚಾರದಲ್ಲಿ ಅವರು ಹೊಂದಿರುವ ತಾತ್ಸಾರ ಹಾಗೂ ತಿರಸ್ಕಾರ ಎದ್ದು ಕಾಣುತ್ತದೆ. ಎಲ್ಲಾ ಸಂಘಟನೆಗಳಿಗೂ ಯುವಕರೇ ಮುಖ್ಯ ಜೀವಾಳ ಎಂದು ಇರುವ ಈ ಸಂದರ್ಭದಲ್ಲಿ ಅವರು ಯುವಕರನ್ನು ಕಡೆಗಣಿಸುವ ಮೂಲಕ ತಮ್ಮೊಳಗೆ ಊಳಿಗಮಾನ್ಯ ಹಾಗೂ ಪ್ರಭುತ್ವಶಾಹಿ ಮನಸ್ಥಿತಿ ಇನ್ನೂ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ'' ಎಂದು ದೂರಿದ್ದಾರೆ.
''ಯುವಕರ ಮೇಲೆ ತಾವು ಹೊಂದಿರುವ ಸಿಟ್ಟನ್ನು ಅವರು ಈ ಹೇಳಿಕೆ ಮೂಲಕ ಹೊರಹಾಕಿದ್ದಾರೆ. ಹಾಗೆಯೇ ಅವರೊಳಗಿರುವ ಈ ಯುವ ವಿರೋಧಿ ಮನಸ್ಸನ್ನು ಯಾರೂ ಕೂಡಾ ಪ್ರಶ್ನಿಸಬಾರದು ಎಂದು ಸಾರ್ವಜನಿಕವಾಗಿ ತಿಳಿಸಿದ್ದಾರೆ. ತಮ್ಮ ಪಕ್ಷ ಮಾತ್ರವಲ್ಲದೇ ದೇಶದಲ್ಲೇ ಯುವ ಜನರನ್ನು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದಾರೆ'' ಎಂದು ಆರೋಪಿಸಿದರು.