ಮಂಗಳೂರು, ಜು 18 (DaijiworldNews/PY): ಕೊರೊನಾ ವಿಷಯದಲ್ಲಿ ಭಯ ಬೇಡ, ಜಾಗರೂಕತೆಯಿರಲಿ ಸೋಂಕಿನಿಂದ ಗುಣಮುಖರಾಗಿರುವ ಸ್ವತ: ವೈದ್ಯರಾಗಿರುವ, ಶಾಸಕ ಭರತ್ ಶೆಟ್ಟಿ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಈ ವಿಚಾರವಾಗಿ ದೈಜಿವರ್ಲ್ಡ್ನೊಂದಿಗೆ ಮಾತನಾಡಿದ ಅವರು, ಕೊರೊನಾ ಬಗ್ಗೆ ಅತಿಯಾದ ಭಯದ ವಾತಾವರಣ ಹಬ್ಬಿದಹಾಗಿದ್ದು, ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ. ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಇವೆಲ್ಲಾ ಕೊರೊನಾಗಿಂತ ತುಂಬಾ ಅಪಾಯಕಾರಿ. ಕೊರೊನಾ ಅಷ್ಟೊಂದು ಅಪಾಯಕಾರಿಯೇನಲ್ಲ. ಹಾಗಾಗಿ ಅತಿಯಾಗಿ ಭಯಪಡುವ ಅಗತ್ಯವಿಲ್ಲ. ಇದನ್ನು ಎದುರಿಸಲು ಮನೋಸ್ಥೈರ್ಯ ಅಗತ್ಯ ಎಂದಿದ್ದಾರೆ.
ಚಿಕಿತ್ಸೆ ಪಡೆದುಕೊಂಡ ಬಗ್ಗೆ ಹೇಳಿದ ಶಾಸಕರು, ಪ್ರಾರಂಭದಲ್ಲಿ ನನಗೆ ಮೈ-ಕೈ ನೋವು ಆರಂಭವಾಗಿದ್ದು, ತಲೆನೋವು ಹಾಗೂ ಅದರೊಂದಿಗೆ ಜ್ವರವೂ ಕಾಣಿಸಿಕೊಂಡಿತ್ತು. ಈ ವೇಳೆ ನಾನು ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದ್ದೆ. ಹಾಗಾಗಿ ಎರಡು ದಿನಗಳಲ್ಲಿ ಮೈ-ಕೈ ನೋವು ವಾಸಿಯಾಗಿತ್ತು. ಆದರೆ, ಜ್ವರ ವಾಸಿಯಾಗಿರಲಿಲ್ಲ. ಈ ಕಾರಣದಿಂದ ಇದು ಕೊರೊನಾದ ಲಕ್ಷಣ ಇರಬಹುದೇ ಎಂದು ಊಹಿಸಿದ್ದೆ. ಜನರೊಂದಿಗೆ ಹೆಚ್ಚು ಚಟುವಟಿಕೆಗಳಲ್ಲಿ ಭಾಗಿಯಾಗುವ ಕಾರಣ ಕೊರೊನಾ ಸೋಂಕು ತಗುಲಿತ್ತೆ ಎಂದು ಅಂದಾಜಿಸಿದೆ. ಅಲ್ಲದೇ, ಮೂರನೇ ದಿನ ನನಗೆ ವಾಸನೆ ಗ್ರಹಿಸುವ ಶಕ್ತಿ ಕೂಡಾ ಕಡಿಮೆಯಾಗಿತ್ತು. ಮೈ-ಕೈ ನೋವು ಆರಂಭವಾಗಿದ್ದ ದಿನದಿಂದಲೇ ನಾನು ಸ್ವತಃ ಹೋಂಕ್ವಾರಂಟೈನ್ ಆಗಿದ್ದು, ಮನೆಯವರಿಂದ ಸಂಪೂರ್ಣ ಸಂಪರ್ಕಕಡಿತ ಮಾಡಿಕೊಂಡಿದ್ದೆ. ಅಲ್ಲದೇ, ಮನೆಯವರಿಗೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಲು ತಿಳಿಸಿದ್ದೆ. ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಹಾಗಾಗಿ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ ಎಂದು ಹೇಳಿದ್ದಾರೆ.
ಕೊರೊನಾದ ಬಗ್ಗೆ ಯಾರೂ ಕೂಡಾ ಭಯಬೀಳುವ ಅವಶ್ಯಕತೆ ಇಲ್ಲ. ಮನೋಸ್ಥೈರ್ಯದಿಂದ ಕೊರೊನಾವನ್ನು ಗೆಲ್ಲಬಹುದು. ವ್ಯಾಯಾಮ ಮಾಡುವುದು ಉತ್ತಮ. ಮುಂಜಾಗ್ರತಾ ಕ್ರಮಾವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಅಲ್ಲದೇ ಆಗಾಗ ಕೈಯನ್ನು ಸೋಪಿನಿಂದ ತೊಳೆದುಕೊಳ್ಳಿ. ಮಾಸ್ಕ್ ಅನ್ನು ಕೂಡಾ ತೊಳೆಯುವುದು ಅಗತ್ಯವಾಗಿದೆ. ಒಂದು ವೇಳೆ ಕೊರೊನಾ ಪಾಸಿಟಿವ್ ಬಂದರೆ, ಭಯಪಡ ಬೇಕಾಗಿಲ್ಲ. ಇದರಲ್ಲಿ ಶೇ. 98ರಷ್ಟು ಜನರಿಗೆ ಯಾವುದೇ ಅಪಾಯವಾಗುವುದಿಲ್ಲ. ಶೇ. 2ರಷ್ಟು ಜನರಿಗೆ ಆಕ್ಸಿಜನ್ ಬೇಕಾಗುವ ಅಗತ್ಯವಿದ್ದು, ವೆಂಟಿಲೇಟರ್ ಅನ್ನು ಅಳವಡಿಸುವ ಸಾಧ್ಯತೆ ಇರಬಹುದು ಎಂದು ತಿಳಿಸಿದ್ದಾರೆ.
ಕೊರೊನಾ ವಿಷಯದಲ್ಲಿ ಭಯ ಬೇಡ, ಜಾಗರೂಕತೆಯಿರಲಿ
ಸೋಂಕಿನಿಂದ ಗುಣಮುಖರಾಗಿರುವ ಸ್ವತ: ವೈದ್ಯರಾಗಿರುವ,
ಶಾಸಕ ಭರತ್ ಶೆಟ್ಟಿಯವರ ಮಾತುಗಳನ್ನು ಕೇಳಿ
Posted by Daijiworld247 on Friday, 17 July 2020