ಉಡುಪಿ, ಜು 18 (Daijiworld News/MSP): ಹಿರಿಯ ಸಾಹಿತಿ, ಚಿಂತಕ , ಭಾಷಾ ವಿಜ್ಞಾನಿ , ತುಳು ನಿಘಂಟು ತಜ್ಞ ಡಾ.ಉಲಿಯಾರ್ ಪದ್ಮನಾಭ ಉಪಾಧ್ಯಾಯ (85) ಅವರು ಜು.17 ರ ಶುಕ್ರವಾರ ನಿಧರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೂಲತಃ ಕಾಪುವಿನ ಉಲಿಯಾರಗೋಲಿಯವರಾದ ಇವರು, ಡಾ. ಯು.ಪಿ ಉಪಾಧ್ಯಾಯ ಎಂದೇ ಚಿರಪರಿಚಿತರಾಗಿದ್ದರು. ಆರು ಸಂಪುಟಗಳಲ್ಲಿ ತುಳು ಭಾಷಾ ಬೃಹತ್ ನಿಘಂಟು ರಚಿಸಿರುವ ಇವರು ತುಳು ಭಾಷಾ ಅಧ್ಯಯನಕ್ಕೆ ಬಹಳ ಶ್ರಮಿಸಿದ್ದರು.
ಆರು ಸಂಪುಟಗಳಲ್ಲಿ ರಚಿಸಿರುವ ತುಳು ನಿಘಂಟನ್ನು ರಾಷ್ಟ್ರಕವಿ ಗೋವಿಂದ್ ಪೈ ಸಂಶೋಧನಾ ಸಂಸ್ಥೆ ಹೊರತಂದಿತ್ತು. ಇದಲ್ಲದೆ ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ. ಯು. ಪಿ ಉಪಾಧ್ಯಾಯ ಮತ್ತು ಅವರ ಪತ್ನಿ ಸುಶೀಲಾ ಇವರಿಬ್ಬರೂ ಸಂಸ್ಕೃತಿ, ಜಾನಪದ, ಕನ್ನಡ, ತುಳು ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.