ಉಡುಪಿ, ಜು 18 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಕೋವಿಡ್ ವೈರಸ್ ಹರಡುವಿಕೆಯ ಸ್ವರೂಪ ಬದಲಾಗುತ್ತಿದೆ. ಹಿಂದೆ ಅಂತರ್ ರಾಜ್ಯದಿಂದ ಬಂದವರಿಂದ ಕೋವಿಡ್ ಪ್ರಕರಣಗಳಲ್ಲಿ ಪತ್ತೆಯಾಗುತ್ತಿತ್ತು. ಆದರೆ ಇದೀಗ ಅಂತರ್ ಜಿಲ್ಲೆಯಿಂದ ಬಂದವರಿಂದಲೇ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನೊಂದು ಮಹತ್ವದ ವಿಚಾರ ಅಂದರೆ ಸರಾಸರಿ ಶೇ 10 % ರಷ್ಟು ಪಾಸಿಟಿವ್ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಬರುತ್ತಿದೆ ಎಂದು ಆರೋಗ್ಯಾಧಿಕಾರಿ, ಜಿಲ್ಲಾ ಕೋವಿಡ್ನ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇತ್ತೀಚಿಗಿನ ಗಮನಾರ್ಹ ಅಂಶವೆಂದರೆ, ಸರಾಸರಿ ಶೇ 20% ರಷ್ಟು ಪ್ರಕರಣಗಳು ಹೊರಜಿಲ್ಲೆಯಿಂದ ಬಂದಿದ್ದು ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ. ಇತ್ತೀಚೆಗೆ ಹೊರ ಜಿಲ್ಲೆಯಿಂದ ಬಂದವರಿಂದ ಜಿಲ್ಲೆ ದಾಟುವವರೆಗೆ ಇಲ್ಲದ ಕಾಯಿಲೆ, ಜಿಲ್ಲೆಗೆ ಬಂದ ಮೇಲೆ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಹೊರ ಜಿಲ್ಲೆಯಿಂದ ಬಂದವರಿಗೆ ಹೋಮ್ ಕ್ವಾರಂಟೈನ್ ಕೂಡ ಇಲ್ಲದಿರುವುದರಿಂದ ಮನೆಯವರಿಗೂ ಹರಡುವ ಪ್ರಮಾಣ ಹೆಚ್ಚು ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನೊಂದು ಮಹತ್ವದ ಅಂಶವೇನೆಂದರೆ ಜಿಲ್ಲೆಯಲ್ಲಿ ಕ್ವಾರಂಟೈನ್ ನಿರ್ವಹಿಸುವುದು ಬಹಳ ಕಷ್ಟವಾಗಿದ್ದು. ಜುಲೈ 16 ರವರೆಗೆ 38 ಮಂದಿಯನ್ನು ಮನೆಯಲ್ಲಿ ಐಸೋಲೇಶನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ ಈಗಾಗಲೇ ಜಿಲ್ಲೆಯಲ್ಲಿ ಹೆಲ್ತ್ ವಾರಿಯರ್ಸ್ ಗಳಾದ ವೈದ್ಯರು ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಪೋಲಿಸ್ ಇಲಾಖಾ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಸೋಂಕಿತ ಮೂಲವನ್ನು ಪತ್ತೆ ಹಚ್ಚುವುದು ಸವಾಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.