ಉಳ್ಳಾಲ, ಜು.18 (DaijiworldNews/MB) : ಉಳ್ಳಾಲದ ಬೆಲ್ಮ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಶುಕ್ರವಾರ ವ್ಯಕ್ತಿಯೋರ್ವರು ಪಿಡ್ಸ್ ಕಾಯಿಲೆಯಿಂದ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದದ್ದನ್ನು ಕಂಡ ರೌಂಡ್ಸ್ನಲ್ಲಿದ್ದ ಕೊಣಾಜೆ ಪೊಲೀಸರು ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಮಿಳುನಾಡು ಮೂಲದ ಜೋಸೆಫ್ ಎಂಬವರು ಪಿಡ್ಸ್ ಕಾಯಿಲೆಯಿಂದಾಗಿ ನೆಲದಲ್ಲಿ ಬಿದ್ದು ಹೊರಲಾಡುತ್ತಿದ್ದು ಈ ಸಂದರ್ಭದಲ್ಲಿ ರೌಂಡ್ಸ್ನಲ್ಲಿದ್ದ ಕೊಣಾಜೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಜಗನ್ನಾಥ್ ಮತ್ತು ಲಕ್ಷ್ಮಣ ಎಂಬವರು ಜೋಸೆಫ್ರವರಿಗೆ ಕೂಡಲೇ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಸ್ಥಳಿಯರಾದ ಶಾರುಖ್, ಗಣೇಶ್ ಹಾಗೂ ಮುಂತಾದವರು ಕೂಡಾ ಜೊಸೇಫ್ ಅವರನ್ನು ಉಪಚರಿಸಿದ್ದಾರೆ.
ಲಾಕ್ಡೌನ್ನ ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳೇ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವಾಗ ನಿರ್ಗತಿಕ ತಮಿಳುನಾಡು ಮೂಲದ ಜೋಸೆಫ್ರವರ ಜೀವವನ್ನು ಉಳಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.