ಬೆಳ್ತಂಗಡಿ, ಜು 18 (Daijiworld News/MSP): ವ್ಯವಹಾರದ ವಿಚಾರದಲ್ಲಿ ಅಪಘಾತವೆಂಬಂತೆ ಬಿಂಬಿಸಿ ಕೊಲೆ ಮಾಡಲೆತ್ನಿಸಿದ ಆರೋಪಿಗಳನ್ನು ಬೆಳ್ತಂಗಡಿ ಪೋಲಿಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಶನಿವಾರ ಸಂತೆ ನಂದಿಗುಂದ ಪ್ರದೀಪ ಸಿ.ಜಿ., ವರುಣ್ ಬುದಮಾರು, ಕಿಶೋರ್ ಹಾಗೂ ಅಭಿ ಬಂಧಿತ ಆರೋಪಿಗಳು.
ಘಟನೆ ವಿವರ : ಕೊಡಗು ಜಿಲ್ಲೆಯ ಶನಿವಾರ ಸಂತೆಯ ನಂದೀಶ್ ಹೆಚ್.ಎನ್ ಹಾಗೂ ಆರೋಪಿತ ಪ್ರದೀಪ್ ಸಿ.ಜಿ. ಗ್ರಾನೈಟ್ ವ್ಯವಹಾರದ ಪಾಲುದಾರರಾಗಿದ್ದರು. ನಂದೀಶ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ವರಣ್ ಮತ್ತು ಕಿಶೋರ್ ಜತೆಗೂಡಿ ಜೂನ್ ೮ ರಂದು ಮುಂಜಾನೆ ಗುರುವಾಯನಕೆರೆ ಕುಲಾಲ ಮಂದಿರದ ಬಳಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತ ನಡೆಸಿದ್ದರು. ಇದರಿಂದ ಕಾಲಿಗೆ, ಕೈ, ತಲೆಗೆ ಗಾಯವಾಗಿತ್ತು. ಅಭಿ ಅವರ ಮೂಲಕ ಅಪಘಾತ ನಡೆಸಿದ ವಾಹನವನ್ನು ಸ್ಕ್ರಾಫ್ಗೆ ನೀಡಿ ಬಿಡಿ ಭಾಗಗಳನ್ನು ಬದಲಾಯಿಸಿ ಸಾಕ್ಷ್ಯ ನಾಶ ಮಾಡಿದ್ದರು ಎನ್ನಲಾಗಿದೆ. ನಂದೀಶ್ ಅವರು ಸಂಚಾರಿ ಠಾಣೆಯಲ್ಲಿ ನೀಡಿದ ದೂರಿನಂತೆ ನ್ಯಾಯಾಲಯ ಹಾಗೂ ಬಂಟ್ವಾಳ ಡಿವೈಎಸ್ಪಿ ಅವರ ಆದೇಶದಂತೆ ಬೆಳ್ತಂಗಡಿ ಠಾಣೆಗೆ ವರ್ಗಾವಣೆಗೊಂಡ ಪ್ರಕರಣದ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಗೆ ಕೊರೋನಾ ಪಾಸಿಟಿವ್: ಪೊಲೀಸರಿಗೆ ಆತಂಕ
ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಜುಲೈ 16ರಂದು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳನ್ನು ಈಗೀನ ನಿಯಮದಂತೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಬಂಧಿತ ನಾಲ್ಕು ಮಂದಿ ಆರೋಪಿಗಳಲ್ಲಿ ಮೂರು ಮಂದಿಗೆ ಕೋವಿದ್-೧೯ ಸೋಂಕು ದೃಢಪಟ್ಟಿದೆ. ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಆನ್ಲೈನ್ ಮೂಲಕ ಹಾಜರು ಪಡಿಸಿದ್ದು, ಪಾಸಿಟಿವ್ ಬಂದ ಮೂರು ಮಂದಿಗೆ ಬೆಳ್ತಂಗಡಿ ಕೋವಿದ್ ಆಸ್ಪತ್ರೆಗೆ ಹಾಗೂ ಇನ್ನೊಬ್ಬನಿಗೆ ಆದೇಶದಂತೆ ಪೊಲೀಸ್ ಕಸ್ಟಡಿ ನೀಡಲಾಗಿದೆ.
ಪ್ರಕರಣವನ್ನು ಬೇಧಿಸಿದ ಪೊಲೀಸರು ಹಾಗೂ ಆರೋಪಿಗಳು ಪೊಲೀಸ್ ಠಾಣೆಯಲ್ಲಿದ್ದ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಇಧೀಗ ಮೂರು ಮಂದಿ ಆರೋಪಿತರಿಗೆ ಕೊರೋನಾ ಪಾಸಿಟಿವ್ನಿಂದಾಗಿ ಆತಂಕ ಮನೆ ಮಾಡಿದೆ