ಬೆಳ್ತಂಗಡಿ, ಜು 18 (Daijiworld News/MSP): ಲಾಯಿಲಾ ಗ್ರಾಮದ ಪಡ್ಲಾಡಿ ಸಮೀಪ ಮೇ 29ರಂದು ಜೂಜು ಅಡ್ಡೆಯಲ್ಲಿ ಪೊಲೀಸರು ಬಂದಂತೆ ನಟಿಸಿ ಸ್ಥಳದಿಂದ ಚಿಕ್ಕಮಗಳೂರು ಮಳಲೂರು ನಿವಾಸಿ ಹೊಯ್ಸಳ ಜೆ.ಪಿ. ಎಂಬವರ 10 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ಬೆಳ್ತಂಗಡಿ ಪೊಲೀಸರಿಗೆ ಶರಣಾಗಿದ್ದಾರೆ.
ಗುರುವಾಯನಕೆರೆ ದಾವೂದ್ ಎಂಬಾತನ ತಂಡದ ಮುಸ್ತಾಫ, ಇಮ್ತಿಯಾಜ್ ಹಾಗೂ ಚೇರಿಮೋನು ಶರಣಾದ ಆರೋಪಿಗಳು. ತನಿಖೆ ಕೈಗೆತ್ತಿಕೊಂಡಿದ್ದ ವೃತ್ತಿ ನಿರೀಕ್ಷಕರು ಆರೋಪಿಗಳಿಂದ 7 ಲಕ್ಷ ರೂ. ನಗದನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೇ 29ರಂದು ಹೊಯ್ಸಳ ಜೆ.ಪಿ. ಎಂಬುವರು ಲಾಯಿಲಾ ಪಡ್ಲಾಡಿ ಸಮೀಪ ಮನೆಯಂಗಳದಲ್ಲಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದಾಗ ದಾವುದ್ ಸ್ಥಳದಲ್ಲಿದ್ದು, ರಾತ್ರಿ 10.30ರವೇಳೆಗೆ ಪೊಲೀಸ್ ದಾಳಿ ಮಾಡಿದಂತೆ ನಟಿಸಿ ಬಳಿಕ ಆತ ಮತ್ತು 5-6ಮಂದಿ ಯುವಕರ ತಂಡ ಹೊಯ್ಸಳ ಅವರ ಹಣೆಗೆ ಹಲ್ಲೆ ನಡೆಸಿ ಕೈಯಲ್ಲಿದ್ದ 10 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ದರೋಡೆ ಮಾಡಿರುವುದಾಗಿ ದೂರು ದಾಖಲಾಗಿತ್ತು.