ಕಾಸರಗೋಡು, ಜು 18 (Daijiworld News/MSP): ಕೊರೋನದಿಂದ ಉಪ್ಪಳದ ವೃದ್ದೆಯೋರ್ವರು ಮೃತಪಟ್ಟ ಘಟನೆ ನಡೆದಿದ್ದು , ಆರೋಗ್ಯ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ ಇದು ಮೊದಲ ಕೊರೋನಾ ಬಲಿಯಾಗಿದೆ .
ಜುಲೈ 7 ರಂದು ಮೃತಪಟ್ಟ ಕಾಸರಗೋಡು ನಿವಾಸಿಯಾಗಿರುವ ಹುಬ್ಬಳ್ಳಿಯ ವ್ಯಾಪಾರಿಯ ಹೆಸರು ಕೇರಳದ ಕೋವಿಡ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ಇದರಿಂದ ಇದು ಜಿಲ್ಲೆಯಲ್ಲಿ ಕೊರೋನಾ ದಿಂದ ಮೊದಲ ಬಲಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 74 ವರ್ಷದ ಉಪ್ಪಳದ ಹಿದಾಯತ್ ನಗರದ ಮಹಿಳೆ ಕೊರೋನಾ ಸೋಂಕಿನಿಂದ ಜುಲೈ 11 ರಂದು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಶ್ವಾಸ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ವೃದ್ದೆ ಸೇರಿದಂತೆ ಈ ಕುಟುಂಬದ ಎಂಟು ಮಂದಿಗೆ ಸೋಂಕು ತಗಲಿದ್ದು , ಇವರಲ್ಲದೆ ಕುಟುಂಬದ ಏಳು ಮಂದಿಯಲ್ಲಿ ಗುರುವಾರ ಸೋಂಕು ದೃಢಪಟ್ಟಿತ್ತು. ಈ ಪೈಕಿ ಆರು ಮಕ್ಕಳು ಸೇರಿದ್ದಾರೆ .ಇವರಿಗೆ ಎಲ್ಲಿಂದ ಸೋಂಕು ತಗುಲಿದೆ ಎಂದು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲಾಗಿದ್ದರೂ ಮೂರನೇ ಹಂತದಲ್ಲಿ ಸಮುದಾಯ ಹರಡುವಿಕೆ ಕಂಡುಬರತೊಡಗಿದೆ . ಕರ್ನಾಟಕ ಹುಬ್ಬಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಮೊಗ್ರಾಲ್ ಪುತ್ತೂರು ನಿವಾಸಿ ಜುಲೈ 7 ರಂದು ಕಾಸರಗೋಡು ಜನರಲ್ ಆಸ್ಪತ್ರೆ ಗೆ ತಲಪಿಸಿದರೂ ಮೃತಪಟ್ಟಿದ್ದರು. ಹುಬ್ಬಳ್ಳಿಯಿಂದ ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿಗೆ ಕರೆತರಲಾಗಿತ್ತು
ಬಳಿಕ ನಡೆಸಿದ ತಪಾಸಣೆಯಿಂದ ಇವರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು .ಆದರೆ ಜಿಲ್ಲೆಯಲ್ಲಿ ಚಿಕಿತ್ಸೆಗೆ ದಾಖಲಾಗದ ಹಿನ್ನಲೆಯಲ್ಲಿ ಈ ವ್ಯಕ್ತಿಯ ಹೆಸರು ಕೋವಿಡ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಜುಲೈ 12 ಮತ್ತು 25 ರಂದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50 ದಾಟಿತ್ತು . ಇದರಲ್ಲಿ ಬಹುತೇಕ ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿತು . ಶುಕ್ರವಾರ 32 ಮಂದಿಗೆ ಸೋಂಕು ದೃಢಪಟ್ಟಿತ್ತು . ಈ ಪೈಕಿ 23 ಮಂದಿಗೆ ಸಂಪರ್ಕ ದಿಂದ ಸೋಂಕು ತಗಲಿದೆ. ಜಿಲ್ಲೆಯಲ್ಲಿ ಇದುವರೆಗೆ 818 ಮಂದಿಗೆ ಸೋಂಕು ದೃಢಪಟ್ಟಿತ್ತು , ಮೂರನೇ ಹಂತದಲ್ಲಿ ಮಾತ್ರ 640 ಮಂದಿಗೆ ಸೋಂಕು ತಗಲಿದೆ . ಈ ಪೈಕಿ 194 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ. ಜಿಲ್ಲೆಯಲ್ಲಿ ಈಗ 313 ಮಂದಿ ಚಿಕಿತ್ಸೆ ಪಡೆಯುತ್ತಿದ್ದು , 505 ಮಂದಿ ಗುಣಮುಖರಾಗಿದ್ದಾರೆ.