ಉಡುಪಿ, ಜು.17 (DaijiworldNews/MB) : ಕೊರೊನಾ ವರದಿಗಾಗಿ ಕಾದು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಬಿಟಿಸ್ಗೆ ಚಿಕಿತ್ಸೆ ನೀಡದ ಕಾರಣ ಪೆರಂಪಳ್ಳಿಯ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಈ ಬಗ್ಗೆ ದಾಯ್ಜಿವಲ್ಡ್ ಮಾಧ್ಯಮದ ಬಳಿ ಅಳಲು ತೋಡಿಕೊಂಡ ಮೃತ ವ್ಯಕ್ತಿಯ ಸಹೋದರ ಪ್ರಶಾಂತ್ ಭಟ್, ''ಡಯಾಬಿಟಿಸ್ ಇದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ದಾಖಲು ಮಾಡಲು ವೈದ್ಯರು ನಿರಾಕರಿಸಿದ್ದಾರೆ'' ಎಂದು ಹೇಳಿದ್ದಾರೆ.
''ವೈದ್ಯರು ನಿರಾಕರಿಸಿದ ಕಾರಣ ಉಡುಪಿ ಶಾಸಕರಿಗೆ ಕರೆ ಮಾಡಿ ಸಹಾಯ ಕೋರಿದಾಗ ಜಿಲ್ಲಾ ಆಸ್ಪತ್ರೆಗೆ ಪೋನ್ ಮಾಡಿ ಬೆಡ್ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚಿಸಿದ್ದಾರೆ. ಶಾಸಕರ ಸೂಚನೆ ನಂತರ ರೋಗಿಯನ್ನು ಆಸ್ಪತ್ರೆಗೆ ಸಿಬ್ಬಂದಿಗಳು ಸೇರಿಸಿಕೊಂಡಿದ್ದಾರೆ. ಆದರೆ ಕೊರೊನಾ ವರದಿಗಾಗಿ ಕಾದು ಡಯಾಬಿಟಿಸ್, ಕಫದ ಸಮಸ್ಯೆಗೆ ವೈದ್ಯರು ಚಿಕಿತ್ಸೆಯೇ ನೀಡಿಲ್ಲ. ಪರಿ ಪರಿಯಾಗಿ ಕೇಳಿಕೊಂಡರು ವೆಂಟಿಲೇಟರ್, ಚಿಕಿತ್ಸಾ ವ್ಯವಸ್ಥೆಯನ್ನು ಜಿಲ್ಲಾ ಆಸ್ಪತ್ರೆ ವೈದ್ಯರು ಮಾಡಿಲ್ಲ'' ಎಂದು ಮೃತ ರೋಗಿಯ ಸಹೋದರ ದೂರಿದ್ದಾರೆ.
''ವೈದ್ಯರು ಚಿಕಿತ್ಸೆ ನೀಡದ ಕಾರಣದಿಂದ ಮತ್ತೆ ಶಾಸಕರ ಬಳಿ ಸಮಸ್ಯೆಯನ್ನು ಹೇಳಿಕೊಂಡಾಗ ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವೈದ್ಯರು ಬೆಡ್ ವ್ಯವಸ್ಥೆ ಮಾಡಿಸಿದ್ದಾರೆ. ಕೊರೊನಾ ಚಿಕಿತ್ಸೆಗಳ ಮಧ್ಯೆಯೂ ಟಿಎಂಎಪೈ ಆಸ್ಪತ್ರೆಯವರು ಡಯಾಬಿಟಿಸ್ ರೋಗಿಗೆ ಚಿಕಿತ್ಸೆ ನೀಡಲು ಹರಸಾಹಸ ಪಟ್ಟಿದ್ದಾರೆ. ಆದರೆ ಆಗಾಗಲೇ ತಡವಾಗಿದ್ದು ನನ್ನ ಸಹೋದರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ'' ಎಂದು ಮೃತ ವ್ಯಕ್ತಿಯ ಸಹೋದರ ಪ್ರಶಾಂತ್ ಭಟ್ ಅಳಲು ತೋಡಿಕೊಂಡಿದ್ದಾರೆ.