ಮಂಗಳೂರು, ಜು 17 (DaijiworldNews/PY): ನಗರದಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಭಾರಿ ಮಳೆಯಿಂದಾಗಿ ಜು 16ರ ಗುರುವಾರ ಉಳ್ಳಾಲದ ಹಳೆಕೋಟೆ ಬಳಿ ಗುಡ್ಡ ಕುಸಿದಿದ್ದು, ಇದರ ಪರಿಣಾಮ ಆ ಪ್ರದೇಶದಲ್ಲಿರುವ ಕಟ್ಟಡಗಳು ಅಪಾಯದಲ್ಲಿವೆ. ಈ ನಿಟ್ಟಿನಲ್ಲಿ ಕಟ್ಟಡದಲ್ಲಿ ವಾಸಿಸುತ್ತಿದ್ದ ಮೂರು ಕುಟುಂಬಗಳನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಕಟ್ಟಡವು ಹಳೆಕೋಟೆ ನಿವಾಸಿ ಅಬ್ದುಲ್ಲಾ ಎನ್ನುವವರ ಒಡೆತನದಲ್ಲಿದ್ದು, ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು. ಭೂಕುಸಿತದ ಕಾರಣದಿಂದ ಕಟ್ಟಡವು ಬಿರುಕು ಬಿಟ್ಟಿದ್ದು, ವಿದ್ಯುತ್ ಕಂಬ ಕೂಡಾ ಧರೆಗುರುಳಿದೆ. ಅಲ್ಲದೇ, ಭೂಕುಸಿತದ ಕಾರಣದಿಂದ ಅಲ್ಲಿನ ರಸ್ತೆಗೂ ಹಾನಿ ಸಂಭವಿಸಿದೆ.
ಕಳೆದ ವರ್ಷವೂ ಕೂಡಾ ಈ ರಸ್ತೆಯು ಹಾನಿಯಾಗಿತ್ತು. ಅದನ್ನು ಸರಿಪಡಿಸಲು ಅಧಿಕಾರಿಗಳು ಹಾಗೂ ಶಾಸಕ ಯು.ಟಿ. ಖಾದರ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ಈ ವಿಚಾರದಲ್ಲಿ ಇನ್ನೂ ಏನನ್ನು ಮಾಡಿಲ್ಲ ಎಂದು ಪುರಸಭೆ ಕೌನ್ಸಿಲರ್ ಜರೀನಾ ರವೂಫ್ ಹೇಳಿದ್ದಾರೆ.
ಉಳ್ಳಾಲ ಪುರಸಭೆ ಆಯುಕ್ತ ರಾಯಪ್ಪ, ಗ್ರಾಮ ಲೆಕ್ಕಾಧಿಕಾರಿ ಪ್ರಮೋದ್, ಸಹಾಯಕ ನವನೀತ್ ಹಾಗೂ ಪುರಸಭೆ ಕೌನ್ಸಿಲರ್ ಜರೀನಾ ಸ್ಥಳಕ್ಕೆ ಭೇಟಿ ನೀಡಿ ಹಾನಿಯಾದ ಪ್ರದೇಶವನ್ನು ಪರಿಶೀಲಿಸಿದರು.