ಬಂಟ್ವಾಳ, ಜು 10 (Daijiworld News/MSP): ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳ ಮೇಲೆ ವ್ಯಕ್ತಿಯೋರ್ವ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಗಾಯಾಳು ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ವಿವರ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಮಾಹಿತಿಯ ಬಂದ ಮೇರೆಗೆ ಸಿಬ್ಬಂದಿಗಳಾದ ಹೆಚ್ ಸಿ ದೇವಪ್ಪ ಹಾಗೂ ಪಿಸಿ ಮಲ್ಲಿಕಸಾಬ್ ಎಂಬವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿ ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ್ ಟಿ ಹಾಗೂ ಸಿಬ್ಬಂದಿ ನಿರಂಜನ್ ಅವರೊಂದಿಗೆ ಧಾವಿಸಿದ್ದಾರೆ.
ಈ ವೇಳೆ ಗೋಳ್ತಮಜಲು ಬಲ್ಲೆಕೋಡಿ ಮನೆಯ ಅಬ್ದುಲ್ ಸಲಾಂ (28) ಎಂಬಾತ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಆತನ ಬಳಿ ತೆರಳಿ ಗಲಾಟೆ ನಿಯಂತ್ರಿಸಲು ಪ್ರಯತ್ನಿಸಿದಾಗ ಅವ್ಯಾಚವಾಗಿ ನಿಂದಿಸಿ ಏಕಾಏಕಿ ಕಬ್ಬಿಣದ ರಾಡ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸ್ ವಾಹನವನ್ನು ರಾಡ್ ನಿಂದ ಹೊಡೆದು ಜಖಂಗೊಳಿಸಿದ್ದಾನೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಹಲ್ಲೆ ನಡೆಸುವುದನ್ನು ತಡೆದು ಆರೋಪಿಗೆ ಸಾರ್ವಜನಿಕವಾಗಿ ಥಳಿಸಿದ್ದು ಈತನಿಗೂ ಗಾಯ ನೋವುಗಳಾಗಿರುತ್ತದೆ ಎಂದು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕ ರಾದ ಶೈಲೇಶ್ ಟಿ ಮತ್ತು ಇತರ 3 ಪೊಲೀಸರು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಆರೋಪಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.