ಕಾಸರಗೋಡು, ಜು. 08 (DaijiworldNews/MB) : ಗಡಿ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಗಾಗಿ ಆಗಮಿಸುವವರಿಗೆ ಗುರುತು ಚೀಟಿ ಕಡ್ಡಾಯ ಮಾಡಲಾಗಿದೆ. ಪಾಣತ್ತೂರು ಸಹಿತ ಗಡಿಪ್ರದೇಶಗಳ ಪಿ.ಎಚ್.ಸಿ.ಗಳಲ್ಲಿ ಇತರ ರಾಜ್ಯಗಳ ಕಾರ್ಮಿಕರಲ್ಲಿ ಕೆಲವರಿಗೆ ಕೋವಿಡ್ ಸೋಂಕು ಖಚಿತವಾಗಿರುವ ಹಿನ್ನೆಲೆಯಲ್ಲಿ ಗುರುತುಚೀಟಿ ಕಡ್ಡಾಯಗೊಳಿಸಲಾಗಿದೆ.
ವಿವಾಹ ಸಮಾರಂಭಕ್ಕೆ ತೆರಳಲು 31 ವರೆಗೆ ಪಾಸ್ ಇಲ್ಲ
ವಿವಾಹ ಸಮಾರಂಭಗಳಿಗೆ ಜು.31 ವರೆಗೆ ಪಾಸ್ ಮಂಜೂರು ಮಾಡುವುದಿಲ್ಲ. ಇತರ ರಾಜ್ಯಗಳಿಗೆ ವಿವಾಹ ಸಂಬಂಧ ಸಮಾರಂಭಗಳಿಗೆ ತೆರಳುವವರಿಗೆ ನೂತನವಾಗಿ ಜು.31 ವರೆಗೆ ಪಾಸ್ ನೀಡುವುದಿಲ್ಲ. ಸದ್ರಿ ಈ ಸಂಬಂಧ ಪಾಸ್ ಮಂಜೂರು ಮಾಡಿರುವವರಲ್ಲಿ 5 ಮಂದಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಸಭೆ ಹೇಳಿದೆ.
ವೃದ್ಧರಿಗೆ,ಮಕ್ಕಳಿಗೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಇಲ್ಲ
65 ವರ್ಷಕ್ಕಿಂತ ಅಧಿಕ ವಯೋಮಾನದವರಿಗೆ, 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಇಲ್ಲ. ಸರಕಾರಿ, ಖಾಸಗಿ ಬಸ್ ಸಹಿತ ಸಾರ್ವಜನಿಕ ವಾಹನಗಳಲ್ಲಿ ಅವರು ಸಂಚರಿಸಕೂಡದು ಎಂದು ಸಭೆ ತಿಳಿಸಿದೆ.
ಸಾರ್ವಜನಿಕ ಸಮಾರಂಭಗಳಿಗೆ ನಿಯಂತ್ರಣ
ಕಾಸರಗೋಡು ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸುವುದಿದ್ದರೆ 10ಕ್ಕಿಂತ ಅಧಿಕ ಮಂದಿ ಭಾಗವಹಿಸಕೂಡದು. ಸುಭಿಕ್ಷ ಕೇರಳಂ ನಂಥಾ ಕಾರ್ಯಕ್ರಮಗಳ ಉದ್ಘಾಟನೆ ಸಭೆಗಳನ್ನು ಜು.31 ವರೆಗೆ ನಡೆಸಕೂಡದು. ಕೋವಿಡ್ ಮಾನದಂಡಗಳಿಗೆ ವಿರೋಧವಾಗಿ ಜನ ಗುಂಪು ಸೇರಕೂಡದು.
ಕ್ರೀಡಾ ಸ್ಪರ್ಧೆಗಳು ಸಲ್ಲದು
ಫುಟ್ ಬಾಲ್, ಕ್ರಿಕೆಟ್ ಸಹಿತ ಕ್ರೀಡೆಗಳ ಸ್ಪರ್ಧೆ ನಡೆಸಲು ಜು.31 ವರೆಗೆ ಅನುಮತಿಯಿಲ್ಲ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಕ್ಲಬ್ ಗಳಿಗೆ ಮಾಹಿತಿ ನೀಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಹೆಚ್ಚುವರಿ ಸಿಬ್ಬಂದಿ ಕರ್ತವ್ಯಕ್ಕೆ
ಕಟ್ಟುನಿಟ್ಟು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸರ ಹೊರತಾಗಿ ಕಂದಾಯ, ಅರಣ್ಯ, ಸಾರಿಗೆ, ಅಬಕಾರಿ ಇಲಾಖೆಗಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ.
ಎಣ್ಮಕಜೆ ಪಂಚಾಯತ್ ಗಡಿ ಪ್ರದೇಶದಲ್ಲಿ ತಾತ್ಕಾಲಿಕ ಪಡಿತರ ಅಂಗಡಿಯೊಂದನ್ನು ಆರಂಭಿಸಲು ಜಿಲ್ಲಾ ಸಪ್ಲೈ ಅಧಿಕಾರಿಗೆ ಆದೇಶ ನೀಡಲಾಗಿದೆ. ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಚಟುವಟಿಕೆಗಳನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ.