ಕೋಟ, ಜು 08 (Daijiworld News/MSP): ಕೋಟ ಪರಿಸರದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪಾಸಿಟಿವ್ ಕೇಸ್ಗಳು ಬಂದಿದ್ದು, ಈ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಇಲಾಖೆಯ ವತಿಯಿಂದ ಮಾಡಲಾಗಿದ್ದು, ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಅಮೃತೇಶ್ವರಿ ಸಭಾಂಗಣದಲ್ಲಿ ಬುಧವಾರ ಕೊರೊನಾ ಜಾಗೃತಿ ಸಮಿತಿಯ ಸಭೆ ನಡೆಸಿ ಕೊರೊನಾ ಕುರಿತು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮದ ಬಗ್ಗೆ ಅವರು ಮಾತನಾಡಿದರು.
ಕೊರೊನಾದಿಂದ ದೂರವಿರಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಎಲ್ಲ ಇಲಾಖೆಯಲ್ಲಿ ಸಮನ್ವಯತೆ ಬೇಕು. ಜನರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕು. ಸೀಲ್ಡೌನ್, ಕ್ವಾರಂಟೈನ್ ಉಲ್ಲಂಘನೆ ಮಾಡಿದಲ್ಲಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಲ್ಲಿ ಇತರರಿಗೂ ಪಾಠವಾಗುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಮಾದರಿ ಸಂಗ್ರಹ ಹೆಚ್ಚಿದ್ದು, ಲ್ಯಾಬ್ಗಳ ಸಂಖ್ಯೆ ಕಡಿಮೆ ಇರುವುದರಿಂದ ವರದಿ ಬರಲು ತಡವಾಗುತ್ತಿದೆ ಎಂದ ಅವರು ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ಶೀತ, ಕೆಮ್ಮು, ಜ್ವರಕ್ಕೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಗಳಲ್ಲಿಯೂ ಅಗತ್ಯವಿರುವ ಔಷಧಿಗಳನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಗರಪ್ರದೇಶಕ್ಕೂ ಕಾರ್ಯಪಡೆ
ಗ್ರಾಮಾಂತರ ಪ್ರದೇಶದಲ್ಲಿರುವ ಕಾರ್ಯಪಡೆ ಇನ್ನು ಮುಂದೆ ನಗರ ಪ್ರದೇಶದಲ್ಲಿಯೂ ಆರಂಭಿಸಲಾಗುವುದು. ರೋಗನಿರೋಧಕ ಶಕ್ತಿಯುಳ್ಳ ಮಾತ್ರೆಗಳನ್ನು ಕಾರ್ಯಪಡೆಯ ಸದಸ್ಯರಿಗೆ ಉಚಿತವಾಗಿ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಮಾತನಾಡಿ ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಇದ್ದವರಿಗೂ ಕ್ವಾರಂಟೈನ್ ಮತ್ತು ಮನೆ ಹಾಗೂ ಆ ಪರಿಸರವನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಇದಕ್ಕೆ ಸಹಕಾರ ಅಗತ್ಯ ಎಂದರು.
ಡಿವೈಎಸ್ಪಿ ಜೈಶಂಕರ್ ಮಾತನಾಡಿ ಸಭೆ ಸಮಾರಂಭಗಳಲ್ಲಿ ಅದರಲ್ಲಿಯೂ ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು ಎಂದು ಹೇಳಿದರು.
ಗಮನ ಸೆಳೆದ ಕಾರ್ಯಪಡೆ
ಕೋಟ ಗ್ರಾಮಪಂಚಾಯತ್ ಕೋವಿಡ್ ಕಾರ್ಯಪಡೆಯ ಸದಸ್ಯರಾದ ಭುಜಂಗ ಗುರಿಕಾರ್ ಹಾಗೂ ಚಂದ್ರ ಪೂಜಾರಿ,ಸಂತೋಷ್ ಪ್ರಭು ಜನಸಾಮಾನ್ಯರ ಕೊರೋನಾ ಸಮಸ್ಯೆ ಕುರಿತಾಗಿ ಸಚಿವರಲ್ಲಿ ಮಾಹಿತಿ ಪಡೆದರು.
ಸಭೆಯಲ್ಲಿ ಆನಂದ್ ಸಿ ಕುಂದರ್, ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಠಾಣೆಯ ಸಬ್ಇನ್ಸ್ಪೆಕ್ಟರ್ ಸಂತೋಷ್.ಬಿ.ಪಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ,ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್,ಕೋಟ ಗ್ರಾಮಪಂಚಾಯತ್ ಪಿ.ಡಿ.ಓ ಸುರೇಶ್ ಬಂಗೇರ,ಕೋಟತಟ್ಟು ಪಿ.ಡಿ.ಓ ಶೈಲ ಪೂಜಾರಿ,ಕಂದಾಯ ನೀರಿಕ್ಷಕ ರಾಜು,ಕೋಟ ವಿ.ಎ ಚಲುವರಾಜು,ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.ಸಚಿವರ ಆಪ್ತ ಸಹಾಯಕ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.