Karavali
ಕಾಸರಗೋಡಿನಿಂದ ಮಂಗಳೂರು ಆಗಮಿಸುವವರ ಪಾಸ್ ತಾತ್ಕಾಲಿಕ ರದ್ದು
- Mon, Jul 06 2020 07:35:27 PM
-
ಕಾಸರಗೋಡು, ಜು 06 (DaijiworldNews/SM): ಮಂಗಳೂರಿಗೆ ಪಾಸ್ ಮೂಲಕ ದಿನಂಪ್ರತಿ ತೆರಳುವವರ ಪಾಸ್ ನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಸಮುದಾಯ ಹರಡುವಿಕೆ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿಗೆ ಉದ್ಯೋಗಕ್ಕೆ ತೆರಳುವವರು ಅಲ್ಲೇ ವಾಸ್ತವ್ಯ ಹೂಡಬೇಕು. ತಿಂಗಳಿಗೊಮ್ಮೆ ಊರಿಗೆ ಬರುವಂತಗಾಬೇಕು. ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಈ ಆದೇಶ ಅನ್ವಯವಾಗಲಿದೆ. ಕೇರಳ-ಕರ್ನಾಟಕ ಸಂಪರ್ಕ ರಸ್ತೆಯಲ್ಲಿ ಎಲ್ಲಾ ರೀತಿಯ ನಿಗಾ ಇರಿಸಲಾಗುವುದು. ಗಡಿ ರಸ್ತೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಬ್ಯಾರಿಕೇಡ್ ಗಳನ್ನು ಇರಿಸಲಾಗುವುದು. ಮೂವರು ಸಿಬ್ಬಂದಿಗಳನ್ನು ನೇಮಿಸಲಾಗುವುದು. ಗ್ರಾಮ ಪಂಚಾಯತ್ , ಜಿಲ್ಲಾಡಳಿತ, ಪೊಲೀಸರು ನಿರ್ಧರಿಸುವ ರಸ್ತೆಗಳಲ್ಲಿ ಮಾತ್ರ ಸಂಚಾರಕ್ಕೆ ಅನುಮತಿ ಲಭಿಸಲಿದೆ. ಸಂಚಾರಕ್ಕೆ ಅನುಮತಿ ನೀಡುವ ರಸ್ತೆಗಳಲ್ಲಿ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ ಎಂಬುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡದ ಸಮೀಪ ಪ್ರದೇಶಗಳಿಗೆ ಅನಿವಾರ್ಯವಾಗಿ ತೆರಳಬೇಕಾಗಿ ಬಂದಲ್ಲಿ ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳ ತಪಾಸಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಮೀಪದ ಗ್ರಾಮಪಂಚಾಯತ್ ಗಳೊಂದಿಗೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರುವಂತೆ ಮಂಜೇಶ್ವರ ಬ್ಲೋಕ್ ಪಂಚಾಯತ್ ಗಳಿಗೆ ಸಭೆಯಲ್ಲಿ ಆದೇಶಿಸಲಾಗಿದೆ.
ಜಿಲ್ಲೆಯ ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗೂಡುತ್ತಿರುವುದು ಗಮನಕ್ಕೆ ಬಂದಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆ ಪೊಲೀಸರಿಗೆ ಆದೇಶ ನೀಡಿದೆ. ಮಾಸ್ಕ್ ಧರಿಸದೆ ಇರುವುದು, ಶಾರೀರಿಕ ಅಂತರ ಕಾಯ್ದುಕೊಳ್ಳದೇ ಇರುವುದು, ಸಾಬೂನು, ಸ್ಯಾನಿಟೈಸರ್ ಇತ್ಯಾದಿ ಬಳಸಿ ಕೈತೊಳೆಯದೇ ಇರುವುದು ಇತ್ಯಾದಿಗಳೂ ಕೆಲವೆಡೆ ನಡೆಯದೆ ಇರುವ ಬಗ್ಗೂ ಮಾಹಿತಿ ಲಭಿಸಿದೆ. ಈ ಸಂಬಂಧ ಕಾನೂನು ಕ್ರಮಗಳು ಜಾರಿಗಳ್ಳಲಿವೆ. ಕಟ್ಟುನಿಟ್ಟು ಯಥಾ ಪ್ರಕಾರ ಜಾರಿಗೊಳ್ಳಲಿದೆ ಎಂದು ಸಭೆ ತಿಳಿಸಿದೆ.
10 ಮಂದಿಗಿಂತ ಅಧಿಕ ಸಲ್ಲದು
ಪ್ರತಿಭಟನೆ ಸಹಿತ ಕಾರ್ಯಕ್ರಮಗಳಲ್ಲಿ 10 ಮಂದಿಗಿಂತ ಅಧಿಕ ಜನ ಸೇರಕೂಡದು. ಇಲ್ಲಿ ಭಾಗವಹಿಸುವವರು ಮಾಸ್ಕ್ ಧಾರಣೆ ಸಹಿತ ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಇತರ ರಾಜ್ಯಗಳ ಕಾರ್ಮಿಕರ ಹೊಣೆಗಾರಿಕೆ ಗುತ್ತಿಗೆದಾರರದು
ಇತರ ರಾಜ್ಯಗಳ ಕಾರ್ಮಿಕರು ರಾಜ್ಯ ಸರಕಾರದ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿ ಕಾಸರಗೋಡು ಜಿಲ್ಲೆಗೆ ಆಗಮಿಸಬೇಕು. ಇವರ ಪೂರ್ಣ ಹೊಣೆಗಾರಿಗೆ ಗುತ್ತಿಗೆದಾರರು ವಹಿಸಿಕೊಳ್ಳಬೇಕು. ಕಾರ್ಮಿಕರಿಗೆ ಬೇಕಾದ ಸೌಲಭ್ಯಗಳನ್ನು ಅವರು ಒದಗಿಸಬೇಕು. ಕಾರ್ಮಿಕರಿಗೆ ಪ್ರತಿಕೂಲ ಪರಿಸ್ಥಿತಿ ಒದಗಿದರೆ ಆಯಾ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಎಚ್ಚರಿಕೆ ನೀಡಿದೆ.
ಇತರ ರಾಜ್ಯಗಳಿಂದ, ವಿದೇಶಗಳಿಂದ ಊರಿಗೆ ಮರಳುವವರು ರಾಜ್ಯ ಸರಕಾರದ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿ ಜಿಲ್ಲೆಗೆ ಆಗಮಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ. ಇತರ ರಾಜ್ಯಗಳಿಂದ ಮೀನು, ತರಕಾರಿ ಇತ್ಯಾದಿ ಹೇರಿಕೊಂಡು ಬರುವ ಲಾರಿಗಳ ಚಾಲಕರಿಗೆ ಹೋಟೆಲ್ಗಳಲ್ಲಿ ಆಹಾರ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಬೇಕು. ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಮಂಜೇಶ್ವರ ವಲಯದಲ್ಲಿ ಲಾರಿಗಳನ್ನು ಪಾರ್ಕಿಂಗ್ ಮಾಡಬಾರದು. ಹೋಟೆಲ್ ಗಳ ಬಳಿ ಲಾರಿಗಳನ್ನು ಸಾಮೂಹಿಕವಾಗಿ ನಿಲುಗಡೆ ನಡೆಸಕೂಡದು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೊಣೆಗಾರಿಕೆ ನೀಡಲಾಗಿದೆ.ಜುಲೈ 31 ವರೆಗೆ ಬೇಕಲಕೋಟೆ ತೆರೆಯುವುದಿಲ್ಲ
ಬೇಕಲಕೋಟೆ ಸಹಿತ ಕಾಸರಗೋಡು ಜಿಲ್ಲೆಯ ಪ್ರವಾಸಿ ತಾಣಗಳನ್ನು ಜುಲೈ 31 ವರೆಗೆ ತೆರೆಯಕೂಡದು ಎಂದು ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ. ರಾಣಿಪುರಂ, ಪೊಸಡಿಗುಂಪೆ ಸಹಿತ ತಾಣಗಳಲ್ಲಿ ಅಕ್ರಮವಾಗಿ ಜನ ಗುಂಪು ಸೇರುತ್ತಿರುವುದಾಗಿ ಸಭೆಯಲ್ಲಿ ಜನಪ್ರತಿನಿಧಿಗಳು ತಿಳಿಸಿದರು. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆ ಪೊಲೀಸರಿಗೆ ಆದೇಶ ನೀಡಿದೆ.
ನಗರ ಪ್ರದೇಶಗಲಲ್ಲಿ ರಸ್ತೆಬದಿಯ ಜ್ಯೂಸ್ ಅಂಗಡಿಗಳಲ್ಲಿ ಇತ್ಯಾದಿ ಕಡೆ ಜನ ಅನಗತ್ಯವಾಗಿ ಗುಂಪುಸೇರುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸೊಂಕು ಹೆಚ್ಚಳಭೀತಿಯಿದೆ. ಇಂಥವುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಭೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.
ಡಯಾಲಿಸಿಸ್ ಯಂತ್ರಗಳ ಖರೀದಿಗೆ ತುರ್ತು ಕ್ರಮ
ಕಾಸರಗೋಡು ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸಂಸದ, ಶಾಸಕರ ನಿಧಿ ಬಳಸಿ ಡಯಾಲಿಸಿಸ್ ಯಂತ್ರಗಳನ್ನು ತುರ್ತಾಗಿ ಖರೀದಿಸಲು ಜಿಲ್ಲಾಡಳಿತೆ ಮಂಜೂರಾತಿ ನೀಡಿದ್ದರೂ, ಇವನ್ನು ಒದಗಿಸಲು ಕೇರಳಮೆಡಿಕಲ್ ನಿಗಮ ವಿಳಂಬ ನಡೆಸುತ್ತಿರುವ ಹಿನ್ನೆಲೆಯಲ್ಲಿ ಟೆಂಡರ್ ಕ್ರಮಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಖರೀದಿ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತುರ್ತು ಅನುಮತಿ ನೀಡಬೇಕು ಎಂಬ ಜಿಲ್ಲಾಡಳಿತದ ಬಯಕೆಯನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು. ಕ್ರೀಡೆ ಇತ್ಯಾದಿ ಕಡೆಗಳಲ್ಲಿ ಆರೋಗ್ಯ ಇಲಾಖೆಯ ಕಟ್ಟುನಿಟ್ಟುಗಳನ್ನು ಕಡ್ಡಾಯಗೊಳಿಸಲು ಸಭೆ ತೀರ್ಮಾನಿಸಿದೆ.
ಸಭೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಬ್ಲೋಕ್ ಪಂಚಾಯತ್ ಗಳ, ನಗರಸಭೆಗಳ, ಮಂಜೇಶ್ವರ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಅಧ್ಯಕ್ಷರುಗಳು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸರ್ವೆ ಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್ ಮೊದಲಾದವರು ಉಪಸ್ಥಿತರಿದ್ದರು.