ಮಂಗಳೂರು: ಬೃಹತ್ ಸಮಾವೇಶದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ತಿರಂಗ ಬಾಲೆ
Wed, Jan 15 2020 10:40:04 PM
ಮಂಗಳೂರು, ಜ 15 (DaijiworldNews/SM): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮುಸ್ಲಿಂ ಸೆಂಟ್ರಲ್ ಕಮಿಟಿ ನಗರದ ಹೊರವಲಯದ ಅಡ್ಯಾರ್ ನಲ್ಲಿ ಶಾಂತಿಯುತವಾಗಿ ಸಮಾವೇಶ ಆಯೋಜನೆ ಮಾಡಿ ಸೈ ಎಣಿಸಿಕೊಂಡಿದೆ. ಈ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ನೂರಕ್ಕೂ ಅಧಿಕ ಗಣ್ಯರು ಪಾಲ್ಗೊಂಡಿದ್ದರು. ಆದರೆ, ಇವರ ಮಧ್ಯೆ ಎಲ್ಲರನ್ನು ಆಕರ್ಷಿಸಿದ್ದು, ಪುಟ್ಟ ಬಾಲಕಿ.
ಸಮಾವೇಶದಲ್ಲಿ ಬಾಲಕಿಯೊಬ್ಬಳು ತ್ರಿವರ್ಣ ತಿರಂಗ ಧರಿಸಿ ಎಲ್ಲರ ಮನ ಸೆಳೆದಿದ್ದಾಳೆ. ಪುಟ್ಟ ಬಾಲಕಿಯೊಬ್ಬಳಿಗೆ ಕೇಸರಿ ಬಿಳಿ ಹಸಿರು ಬಟ್ಟೆ ತೊಟ್ಟು ಸ್ವತಂತ್ರ ಭಾರತದ ಸೌಹಾರ್ದ ಸಂದೇಶವನ್ನು ಸಾರಲಾಗಿದೆ. ಮಾತ್ರವಲ್ಲದೆ, ಬಾಲಕಿಯ ಕೈಯಲ್ಲಿ ತ್ರಿವರ್ಣ ಧ್ವಜವನ್ನು ನೀಡಿ ದೇಶದ ಸಾಂವಿಧಾನಿಕ ಐಕ್ಯತೆಯನ್ನು ಎತ್ತಿ ತೋರಿಸಲಾಗಿದೆ.
ಮತ್ತೊಂದೆಡೆ, ಬೃಹತ್ ತ್ರಿವರ್ಣ ಧ್ವಜವನ್ನು ರ್ಯಾಲಿಯಲ್ಲಿ ತರುವ ಮೂಲಕ ಯುವಕರು ಗಮನ ಸೆಳೆದಿದ್ದಾರೆ. ಇನ್ನು ಸಮಾವೇಶದಲ್ಲಿ ಭಾಗವಹಿಸಿದ್ದ ಬಹುತೇಕರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿದ್ದರು. ಹಾಗೂ ಆಜಾದಿ ಎಂಬುವುದಾಗಿ ಘೋಷಣೆಗಳನ್ನು ಕೂಗುತ್ತಿದ್ದರು.