ಮಂಗಳೂರು: ಬೃಹತ್ ಸಮಾವೇಶದ ಸಂದರ್ಭ ಮಾನವೀಯತೆ ಮೆರೆದ ಮುಸ್ಲಿಂ ಯುವಕರು
Wed, Jan 15 2020 10:18:05 PM
ಮಂಗಳೂರು, ಜ 15 (DaijiworldNews/SM): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮುಸ್ಲಿಂ ಸೆಂಟ್ರಲ್ ಕಮಿಟಿ ನಗರದ ಹೊರವಲಯದ ಅಡ್ಯಾರ್ ನಲ್ಲಿ ಆಯೋಜಿಸಿದ್ದ ಜನ ಜಾಗೃತಿ ಸಮಾವೇಶದ ಸಂದರ್ಭ ಮಾನವೀಯತೆಯನ್ನು ಮೆರೆದಿರುವ ಘಟನೆ ನಡೆದಿದೆ.
ಸಮಾವೇಶ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಟ್ರಾಫಿಕ್ ಜಾಂ ಉಂಟಾಗಿತ್ತು. ಈ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಆಸ್ಪತ್ರೆಗೆ ಮಹಿಳೆಯೋರ್ವರನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾ ಟ್ರಾಫಿಕ್ ಜಾಂನಲ್ಲಿ ಸಿಲುಕಿಕೊಂಡಿದೆ. ತಕ್ಷಣ ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಯುವಕರು ಆಟೋ ರಿಕ್ಷಾವನ್ನು ಎತ್ತಿ ಮತ್ತೊಂದು ಭಾಗದ ರಸ್ತೆಯಲ್ಲಿಟ್ಟಿದ್ದು, ಆ ಮೂಲಕ ಸುಗಮವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಒಂದೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ತೀವ್ರ ಆಕ್ರೋಶವಿದ್ದರೂ ಕೂಡ ಮಹಿಳೆಯೋರ್ವರಿಗೆ ಆಸ್ಪತ್ರೆಗೆ ತೆರಳಲು ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಶಂಸೆಗೆ ಪಾತ್ರವಾಗಿದೆ.