ಕುಂದಾಪುರ, ಜ.12 (Daijiworld News/MB) : ಗುರುವಾರ ಸಂಜೆ ಕೊಲ್ಲೂರಿನಿಂದ ಉಡುಪಿಗೆ ಬರುತ್ತಿದ್ದ ಬಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು ದಂಪತಿಗಳಲ್ಲ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಬಸ್ಸಿನಲ್ಲಿ ವಿಷ ಸೇವಿಸಿದ ರಾಜ್ಕುಮಾರ್ ಹಾಗೂ ಸಂಗೀತಾ ದಂಪತಿಗಳಲ್ಲದೇ ಅವರು ಪ್ರತ್ಯೇಕ ಕುಟುಂಬವನ್ನು ಹೊಂದಿದ್ದಾರೆ. ಅವರೊಂದಿಗೆ ಇದ್ದ ಮಗು ಸಂಗೀತಾಳದ್ದಾಗಿದೆ. ರಾಜಕುಮಾರ್ಗೆ 2 ಹೆಣ್ಣು ಹಾಗೂ 1 ಗಂಡು ಮಗುವಿದ್ದು ಸಂಗೀತಾಳಿಗೆ 1 ಗಂಡು ಹಾಗೂ 1 ಹೆಣ್ಣು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮೂಲದವನಾದ ರಾಜಕುಮಾರ್ ಇಲ್ಲಿ ವಲಸೆ ಕಾರ್ಮಿಕನಾಗಿದ್ದು ಆಗಾಗ ಬರುತ್ತಿದ್ದ. ಸಂಗೀತಾ ಹಾಗೂ ರಾಜಕುಮಾರ್ ಇಬ್ಬರು ತಮಿಳುನಾಡಿನ ಕೊಯಮತ್ತೂರಿನವರಾಗಿದ್ದು ಈ ಘಟನೆ ನಡೆಯುವ ಒಂದು ದಿನದ ಹಿಂದೆ ಉಡುಪಿಗೆ ಬಂದಿದ್ದರು.
ಈ ಕುರಿತು ಪೊಲೀಸರಿಗೆ ಹೇಳಿಕೆ ನೀಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತಾ ನಾನು ಬೇಡ ಎಂದು ಹೆಳಿದರು, ರಾಜಕುಮಾರ್ ನನಗೆ ಹಾಗೂ ನನ್ನ ಮಗುವಿಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿದ್ದಾನೆ. ಬಳಿಕ ಅಲ್ಲಿಂದ ನಾವು ಮಂಗಳೂರಿಗೆ ತೆರಳುವ ಬಸ್ಸಿನಲ್ಲಿ ಹತ್ತಿದ್ದೆವು ಎಂದು ತಿಳಿಸಿದ್ದಾರೆ.
ರಾಜಕುಮಾರ್ ಅವರ ಅಣ್ಣ ಬಂದಿದ್ದು ಮೃತದೇಹವನ್ನು ಅವರಿಗೆ ಹಸ್ತಾಂತರ ಮಾಡಲಾಗಿದೆ. ಸಂಗೀತಾಳ ಪತಿ ಹಾಗೂ ತಂದೆ ಆಗಮಿಸಿದ್ದಾರೆ.
ಇವರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ತಾವು ವಿಷ ಸೇವಿಸಿ ಒಂದೂವರೆ ವರ್ಷದ ಮಗುವಿಗೂ ವಿಷ ಕುಡಿಸಿದ್ದರು. ಈ ಪೈಕಿ ರಾಜ್ಕುಮಾರ್(35) ಸಾವನ್ನಪ್ಪಿದ್ದು ಸಂಗೀತಾ(28) ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಮಗು ಸಂಪೂರ್ಣವಾಗಿ ಚೇತರಿಸಿದೆ.