ಮಂಗಳೂರು, ಜ.12 (Daijiworld News/MSP) : ಮುಂಬೈನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಾ ತನ್ನ ಪುಟ್ಟ ಸಂಸಾರವನ್ನು ಸಲಹುತ್ತಿದ್ದ 60 ವರ್ಷದ ಜಗನ್ನಾಥ್ ಪೂಜಾರಿ ಅವರ ಜೀವನದಲ್ಲಿ ವಿಧಿ ಅಟ್ಟಹಾಸ ಮೆರೆದಿದೆ.
ಮುಂಬೈನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿರುವಾಗ ಕಾಡಿದ ವಿಪರೀತ ಗಂಟಲು ನೋವು, ವಾಂತಿಯ ಪರಿಣಾಮ ಜಗನ್ನಾಥ್ ಒಂದು ತುತ್ತು ಆಹಾರವನ್ನು ನುಂಗಲು ವೇದನೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೊನೆಗೆ ಅನಿವಾರ್ಯವಾಗಿ 2019ರ ಅಕ್ಟೋಬರ್ ನಲ್ಲಿ ಮುಂಬೈನ ರಾಮಕೃಷ್ಣ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ತಡಮಾಡದೇ ಕೂಲಂಕುಷ ತಪಾಸಣೆಗೊಳಗಾಗುವಂತೆ ಸಲಹೆ ನೀಡಿದ್ದಾರೆ.
ಊರಿಗೆ ಹಿಂತಿರುಗಿ ಚಿಕಿತ್ಸೆ ಪಡೆದು ಮರಳಿ ಕೆಲಸ ಸೇರಿ ಕುಟುಂಬವನ್ನು ಸಲಹುವ ಕನಸು ಕಾಣುತ್ತಾ ತಮ್ಮೂರಾದ ನಂದಳಿಕೆ ಬಂದಿಳಿದ ಜಗನ್ನಾಥ್, ಅ.5 ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಬರಸಿಡಿಲನಂತೆರಗಿದ್ದು "ಅನ್ನನಾಳದ ಕ್ಯಾನ್ಸರ್" ಎಂಬ ಸುದ್ದಿ. ಅಲ್ಲಿಗೆ ಜಗನ್ನಾಥ್ ಕುಟುಂಬದ ಕನಸುಗಳು ನುಚ್ಚು ನೂರಾಗಿತ್ತು.
ಹೊಟೇಲ್ ನಲ್ಲಿ ಸಹಾಯಕನಾಗಿ ದುಡಿಯುತ್ತಿದ್ದ ಜಗನ್ನಾಥ್ ಅವರಿಗೆ ಸಂಸಾರ ಸಾಗಿಸಲು ಪತ್ನಿ ಮಾಲತಿ ಅವರು ಬೀಡಿ ಕಟ್ಟಿ ನೆರವಾಗುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳ ವಿದ್ಯಾಬ್ಯಾಸದ ಜವಬ್ದಾರಿ ಹೊತ್ತು, ಬಡತನವಿದ್ದರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಈ ಕುಟುಂಬವನ್ನು ಕ್ಯಾನ್ಸರ್ ಎಂಬ ಮಹಾಮಾರಿ ಅಲ್ಲೋಲಕಲ್ಲೋಲ ಮಾಡಿತ್ತು. ಸಹಾಯಯಾಚಿಸಿ, ಸಾಲ ಮಾಡಿ ಜಗನ್ನಾಥ್ ಅವರ ಚಿಕಿತ್ಸೆಗಾಗಿ ಎರಡು ಲಕ್ಷ ರೂ. ಖರ್ಚು ಮಾಡಿ ಈ ಕುಟುಂಬವೀಗ ಕೈ ಚೆಲ್ಲಿ ಕುಳಿತಿದೆ.
ವೈದ್ಯರಿಂದ ಜಗನ್ನಾಥ್ ಅವರು ಸಂಪೂರ್ಣವಾಗಿ ಚೇತರಿಕೆ ಕಾಣುವ ಭರವಸೆ ದೊರಕಿಲ್ಲದಿದ್ದರೂ, ತಂದೆಯ ಸ್ಥಿತಿ ಕಂಡು ಮಕ್ಕಳು, ಜಗನ್ನಾಥ್ ಪತ್ನಿ ಕಣ್ಣೀರಲ್ಲೇ ದಿನದೂಡುತ್ತಿದ್ದಾರೆ.
ಪತಿ ಜಗನ್ನಾಥ್ ಅವರು ಎರಡು ತಿಂಗಳಿನಿಂದ ಕೇವಲ ದ್ರವ ಆಹಾರಗಳನ್ನು ಮಾತ್ರ ಸೇವಿಸುತ್ತಿದ್ದಾರೆ, ಗಂಟಲು ನೋವು ವಿಪರೀತವಾಗಿ ಕಾಡುತ್ತಿದೆ. ಅವರ ದುಡಿಮೆಯಿಂದ ನಮ್ಮ ಪುಟ್ಟ ಕುಟುಂಬದ ಜೀವನ ಸಾಗಿಸುತ್ತಿದ್ದು, ತೀವ್ರ ಸಂಕಷ್ಟದಲ್ಲಿದ್ದೇವೆ. ಪತಿಯ ಚಿಕಿತ್ಸೆಗೂ, ಮಕ್ಕಳ ವಿದ್ಯಾಭ್ಯಾಸ ಶುಲ್ಕವೂ ಪಾವತಿಸಲಾಗದ ಪರಿಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ಪತ್ನಿ ಮಾಲತಿ.
ದಾನಿಗಳ ಸಹಾಯದ ನಿರೀಕ್ಷೆಯಲ್ಲಿರುವ ಈ ಕುಟುಂಬ ಬ್ಯಾಂಕ್ ವಿವರ ಇಂತಿದೆ.
Account name: Malathi
W/O Jaganath Poojary
A/C no: 520101044792480
Name of bank: Corporation bank
Branch: Belman branch
Karkala taluk
IFSC code: CORP0002081
Mobile: +91 9743338468 (Malathi)