ಬಂಟ್ವಾಳ, ಮಾ.28(DaijiworldNews/TA): ಬಸ್ಸ್ ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಕಲ್ಲಡ್ಕದಲ್ಲಿ ಸ್ಥಳೀಯರು ಹಿಡಿದು ನಗರ ಠಾಣೆಯ ಪೊಲೀಸರಿಗೆ ಗುರುವಾರ ಸಂಜೆ ಒಪ್ಪಿಸಿದ್ದಾರೆ.

ಆರೋಪಿಯನ್ನು ನಾವೂರ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಯಾನೆ ಮೋನು ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕನಾಗಿರುವ ಆತ ಪುತ್ತೂರಿನಿಂದ ಬಿ ಸಿ ರೋಡುವರೆಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯ ಮೈಮೇಲೆ ಬಿದ್ದು ಉದ್ದೇಶಪೂರ್ವಕವಾಗಿ ಕೀಟಲೆ ನೀಡಿದ್ದ. ಈ ಬಗ್ಗೆ ಬಸ್ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ನಿರ್ವಾಹಕ ಆತನಿಗೆ ಸರಿಯಾಗಿ ಪ್ರಯಾಣಿಸುವಂತೆ ತಿಳಿಸಿದ್ದ.
ಆರೋಪಿಯು ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದು ಗೊತ್ತಾಗಿ ಇನ್ನೇನು ಸಿಕ್ಕಿಬೀಳುವ ಹೆದರಿಕೆಯಿಂದ ಈತ ಕಲ್ಲಡ್ಕದಲ್ಲಿ ಬಸ್ ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದ ,ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಈತನನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ. ಸ್ಥಳೀಯರು ಈತನನ್ನು ಹಿಡಿದು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಒಪ್ಪಿಸಿದ್ದು, ಈತನ ಬಗ್ಗೆ ಪ್ರಕರಣ ದಾಖಲಾಗಿದೆ.