Entertainment
'ಅಮಿತಾಭ್ ಬಚ್ಚನ್ ಮಗನಾಗಿದ್ದರೂ ನನಗೂ ಕೂಡಾ ಅವಕಾಶ ಸಿಗುತ್ತಿರಲಿಲ್ಲ' - ಅಭಿಷೇಕ್ ಬಚ್ಚನ್
- Tue, Jun 23 2020 07:27:42 PM
-
ಮುಂಬೈ, ಜೂ 23(DaijiworldNews/PY) : ನಾನು ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗನಾಗಿದ್ದರೂ ನನಗೂ ಕೂಡಾ ಅವಕಾಶ ದೊರಕುತ್ತಿರಲಿಲ್ಲ ಎನ್ನುವ ವಿಷಯವನ್ನು ಅಭಿಷೇಕ್ ಬಚ್ಚನ್ ಅವರು ಹಂಚಿಕೊಂಡಿದ್ದಾರೆ.
2000ದಲ್ಲಿ ರೆಫ್ಯೂಜಿ ಸಿನಿಮಾದ ಮೂಲಕ ಅಭಿಷೇಕ್ ಬಚ್ಚನ್ ಅವರ ಸಿನಿ ಬದುಕು ಆರಂಭವಾಗಿದ್ದು, ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅಭಿಷೇಕ್ ಅವರ ಮೊದಲ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವೇಳೆ ಅವರು ಅವಕಾಶಕ್ಕಾಗಿ ಅಲೆದಾಡಿರುವ ತಮ್ಮ ಹಳೆಯ ದಿನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ತಮ್ಮ ಹಳೆಯ ದಿನಗಳನ್ನು ಹಂಚಿಕೊಂಡಿರುವ ಅಭಿಷೇಕ್ ಬಚ್ಚನ್ ಅವರು, ಒಂದೇ ಒಂದು ಅವಕಾಶಕ್ಕಾಗಿ ಬಹಳ ಕಷ್ಟಪಟ್ಟಿದ್ದು, ನಿರ್ಮಾಪಕರ ಹಾಗೂ ನಿರ್ದೇಶಕರ ಮನೆ ಬಾಗಿಲಿಗೆ ಅವಕಾಶಕ್ಕಾಗಿ ಅಲೆದಾಡಿದ ದಿನಗಳೂ ಇದ್ದವು ಎಂದು ಬರೆದುಕೊಂಡಿದ್ದಾರೆ.
ಅಭಿಷೇಕ್ ಅವರು ಬಣ್ಣದ ಲೋಕಕ್ಕೆ ಪ್ರವೇಶ ಮಾಡಿ ಇದೇ ಜೂನ್ 30ಕ್ಕೆ 20 ವರ್ಷಗಳಾಗುತ್ತವೆ. ಇವರು ಧೂಮ್, ಬಂಟಿ ಔರ್ ಬಬ್ಲಿ, ಸರ್ಕಾರ್, ದೋಸ್ತಾನ್, ಆಲ್ ಈಸ್ ವೆಲ್, ಹೌಸ್ ಫುಲ್-3 ಸೇರಿದಂತೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಈ ಬಗ್ಗೆ ಹೇಳಿಕೊಂಡಿರುವ ಅವರು, ಜೂನ್ ತಿಂಗಳ 30ಕ್ಕೆ ನಾನು ನಟನಾಗಿ 20 ವರ್ಷಗಳನ್ನು ಪೂರೈಸುತ್ತಿದ್ದೇನೆ. ಈ ವಿಚಾರವನ್ನು ನಂಬುವುದು ತುಂಬಾ ಕಷ್ಟ. ಇಲ್ಲಿಯವರೆಗಿನ ನನ್ನ ಪ್ರಯಾಣ ತುಂಬಾ ಅದ್ಭುತವಾಗಿತ್ತು. ನಾನು ಬದುಕಿನಲ್ಲಿ ನಡೆದು ಬಂದಿರುವ ಹಾದಿಯನ್ನು ಹಿಂದೆ ತಿರುಗಿ ನೋಡಿದವನೇ ಅಲ್ಲ. ಈ ಸಂದರ್ಭ ನಾನು ನನ್ನ ಸಿನಿಮಾ ಪಯಣದ ಕೆಟ್ಟ ಹಾಗೂ ಒಳ್ಳೆಯ ಸಮಯವನ್ನು ನೆನಪಿಸಿಕೊಳ್ಳುತ್ತೇನೆ. 20 ವರ್ಷಗಳ ಹಿಂದೆ ನಾನು ವಿದೇಶದಿಂದ ಮರಳಿ ಬಂದ ಸಂದರ್ಭ ನನಗೆ 22 ವರ್ಷ. ನನ್ನ ಮೇಲೆ ಹಲವಾರು ಮಂದಿ ನಂಬಿಕೆ ಇಟ್ಟಿದ್ದರು. ನನಗೆ ನನ್ನ ತಂದೆಯೇ ಸ್ಪೂರ್ತಿ ಎಂದು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಪ್ಪನ ಹಾಗೆ ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು, ಸ್ಟಾರ್ ನಟನಾಗಬೇಕು ಎನ್ನುವ ಆಸೆ ಹೊತ್ತು ಬಂದಿದ್ದೆ. 1998ರಲ್ಲಿ ಅವಕಾಶಕ್ಕಾಗಿ ಎಷ್ಟು ನಿರ್ದೇಶಕರ ಹಾಗೂ ನಿರ್ಮಾಪಕರ ಮನೆಗೆ ಅಲೆದಿದ್ದೇನೆ ಎನ್ನುವ ಬಗ್ಗೆ ನನಗೆ ನೆನಪಿಲ್ಲ. ಅನೇಕರೊಂದಿಗೆ ನನಗೆ ಒಂದೇ ಒಂದು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೆ. ಆದರೆ, ನನಗೆ ಅವಕಾಶ ನೀಡಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ನಿದೇರ್ಶಕರಾದ ಜೆ.ಪಿ.ದತ್ತ ಅವರು ರೆಫ್ಯೂಜಿ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ಅವರಿಗೆ ಕೃತಜ್ಞತೆಗಳು ಎಂದಿದ್ದಾರೆ.
ಈ ಸಂದರ್ಭ ತಮ್ಮ ಬಹುದಿನಗಳ ಕನಸಿನ ಸಿನಿಮಾವಾದ ಸಂಜೋತಾ ಎಕ್ಸ್ಪ್ರೆಸ್ ಸೆಟ್ಟೇರದ ವಿಚಾರದ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ.
ಸಂಜೋತಾ ಎಕ್ಸ್ಪ್ರೆಸ್ ಸಿನಿಮಾ ಮಾಡಲು ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಹಾಗೂ ಅಭಿಷೇಕ್ ಇಬ್ಬರು ಮುಂದಾಗಿದ್ದು, ಈ ಸಿನಿಮಾ ಮಾಡಲು ತುಂಬಾ ಕಷ್ಟ ಪಟ್ಟಿದ್ದಾರೆ. ಆದರೆ, ಯಾರೂ ಕೂಡಾ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿಲ್ಲ. ಕೊನೆಗೂ ಈ ಸಿನಿಮಾ ಸೆಟ್ಟೇರಲೇ ಇಲ್ಲ. ಬಳಿಕ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ರಾವ್ ಹಾಗೂ ಅಭಿಷೇಕ್ ಅವರು ದಿಲ್ಲಿ 6 ಸಿನಿಮಾ ಮಾಡಿದ್ದರು.
ಪ್ರಸ್ತುತ ಅಭಿಷೇಕ್ ಅವರ ಬಳಿ ಮೂರ್ನಾಲ್ಕು ಸಿನಿಮಾಗಳಿವೆ. ಅಭಿಷೇಕ್ ಅವರು 2016ರಲ್ಲಿ ತೆರೆಕಂಡ ಮಾನ್ಮಾರ್ಜಿಯಾನ್ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಲೂಡೊ, ದಿ ಬಿಗ್ ಬುಲ್ ಹಾಊ ಬಾಬ್ ಬಿಸ್ವಾಸ್ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ.
View this post on InstagramA post shared by Abhishek Bachchan (@bachchan) on